ಯಲ್ಲಾಪುರ: ಶಿರಸಿ-ಯಲ್ಲಾಪುರ ರಸ್ತೆಯ ತೂಕದಬೈಲ್ ಘಟ್ಟದ ಬಳಿ ಮಳೆ ನೀರಿಗೆ ರಸ್ತೆ ಕೊರೆಯುವ ಆತಂಕ ಎದುರಾಗಿದೆ. ಈಗಾಗಲೆ ರಸ್ತೆ ಅಂಚಿನ ಗಟಾರ ಕೊಚ್ಚಿ ಹೋಗಿದ್ದು, ಮುಂದಿನ ಮಳೆಯೊಳಗೆ ರಸ್ತೆ ಕೊರೆತ ಉಂಟಾಗದoತೆ ತಡೆಯಲು ಪಿಚ್ಚಿಂಗ್ ಕಟ್ಟಬೇಕು ಎಂದು ಸಾಮಾಜಿಕ ಕಾರ್ಯಕರ್ತ ವಿಕಾಸ ನಾಯ್ಕ ಮಂಚಿಕೇರಿ ಆಗ್ರಹಿಸಿದ್ದಾರೆ.
`ಪ್ರತಿ ವರ್ಷ ಮಳೆಗಾಲದಲ್ಲಿ ಘಟ್ಟದ ಬುಡಕ್ಕೆ ರಭಸ ನೀರು ಬರುತ್ತದೆ. ಮಂಚಿಕೇರಿಗೆ ನೀರು ಸರಬರಾಜು ಮಾಡುವ ಬೋರ್ವೆಲ್ ಸಹ ಇರುವುದರಿಂದ ಆ ಪ್ರದೇಶ ತೇವಗೊಂಡಿದ್ದು, ಮಣ್ಣು ಕೊಚ್ಚಿ ಹೋಗುತ್ತಿದೆ. ಹೀಗೆ ಮುಂದುವರೆದರೆ ರಸ್ತೆ ಸಹ ಕೊಚ್ಚಿ ಹೋಗುವ ಸಾಧ್ಯತೆಗಳಿವೆ’ ಎಂದು ವಿಕಾಸ ನಾಯ್ಕ ಹೇಳಿದ್ದಾರೆ.
`ಈ ವರ್ಷದ ಮಳೆಗೆ ರಸ್ತೆ ಅಂಚಿನ ಮೋರಿ ಮಣ್ಣು ಪಾಲಾಗಿದೆ. ಈಗಾಗಲೇ 6 ಅಡಿ ಅಷ್ಟು ಕೊರತವಾಗಿದ್ದು, ಇನ್ನೆರಡು ಅಡಿ ಕೊರತೆ ಆದಲ್ಲಿ ರಸ್ತೆ ಕುಸಿಯಲಿದೆ. ಮಳೆ ನೀರು ಹೋಗಲು ಇಲ್ಲಿ ಗಟಾರವಿದ್ದರೂ ಗುಡ್ಡದ ನೀರು ರಸ್ತೆಗೆ ನುಗ್ಗುವುದರಿಂದ ಕೊರೆತ ಉಂಟಾಗುತ್ತಿದೆ’ ಎಂದವರು ವಿವರಿಸಿದರು.
`ರಸ್ತೆ ಉಳಿಸಿಕೊಳ್ಳಲು ಈ ಭಾಗದಲ್ಲಿ ಪಿಚ್ಚಿಂಗ್ ಕಟ್ಟುವುದು ಅನಿವಾರ್ಯ. ಹೀಗಾಗಿ ಲೋಕೋಪಯೋಗಿ ಇಲಾಖೆಯವರು ಪಿಚ್ಚಿಂಗ್ ನಿರ್ಮಿಸಬೇಕು’ ಎಂದವರು ಒತ್ತಾಯಿಸಿದರು.




