ಹೊನ್ನಾವರ: ಚಲಿಸುತ್ತಿರುವ ಬೈಕಿನ ಮೇಲೆ ಚಿರತೆ ದಾಳಿ ನಡೆಸಿದ್ದು, ಬೈಕ್ ಓಡಿಸುತ್ತಿದ್ದ ಸತ್ಯನಾರಾಯಣ ಹೆಗಡೆ ಬೈಕಿನ ವೇಗ ಹೆಚ್ಚಿಸಿ ಜೀವ ಉಳಿಸಿಕೊಂಡಿದ್ದಾರೆ.
ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದಲ್ಲಿ ಚಿರತೆ ಸಂಚಾರ ನಡೆಸಿದೆ. ಹಿರೇಮಕ್ಕಿಯ ಸತ್ಯನಾರಾಯಣ ಹೆಗಡೆ ಅವರು ಬುಧವಾರ ತಮ್ಮ ತೋಟಕ್ಕೆ ತೆರಳಿದ್ದರು. ಬೈಕಿನ ಸದ್ದು ಕೇಳಿದ ಚಿರತೆ ಬೆನ್ನಹಿಂದೆ ಬಂದಿದ್ದು, ಕನ್ನಡಿಯಲ್ಲಿ ಚಿರತೆ ನೋಡಿದ ಅವರು ಬೈಕಿನ ವೇಗ ಹೆಚ್ಚಿಸಿದರು. ಅದಾಗಿಯೂ ಚಿರತೆ ಬೈಕಿನ ಮೇಲೆ ದಾಳಿ ನಡೆಸಿತು.
ಹೆಗಡೆ ಅವರ ತೋಟದ ಬಳಿ ಚಿರತೆ ಆಕ್ರಮಣ ನಡೆಸಿದ್ದು, ಬೈಕಿನ ಸೀಟು ಚಿರತೆ ಉಗುರಿಗೆ ಸಿಕ್ಕಿ ಹರಿದಿದೆ. `ಬೈಕಿನ ವೇಗ ಹೆಚ್ಚಿಸದೇ ಅಲ್ಲಿಯೇ ನಿಂತಿದ್ದರೆ ತಮ್ಮ ಮೇಲೆಯೂ ವನ್ಯಜೀವಿ ಆಕ್ರಮಣವಾಗುತ್ತಿತ್ತು’ ಎಂದು ಸತ್ಯನಾರಾಯಣ ಹೆಗಡೆ ಆ ಕ್ಷಣದ ಆತಂಕ ಹಂಚಿಕೊoಡರು.
ಹೊನ್ನಾವರದ ಸುತ್ತಲಿನ ಪ್ರದೇಶದಲ್ಲಿ ವನ್ಯಜೀವಿ ಆಕ್ರಮಣ ಹೊಸತಲ್ಲ. ಮನೆ ಕಾವಲಿಗಿರುವ ನಾಯಿಗಳನ್ನು ಚಿರತೆ ಹೊತ್ತೊಯ್ಯುವುದು ಇಲ್ಲಿ ಸಾಮಾನ್ಯ. ಆದರೆ, ಇದೀಗ ಮಾನವನನ್ನು ಗುರಿಯಾಗಿರಿಸಿಕೊಂಡು ಚಿರತೆ ಆಕ್ರಮಣ ನಡೆಸಿದ ಬಗ್ಗೆ ಎಲ್ಲಡೆ ಆತಂಕ ವ್ಯಕ್ತವಾಗಿದೆ. `ಈ ಚಿರತೆಯನ್ನು ಬೇರೆ ಕಡೆ ಸ್ಥಳಾಂತರಿಸಬೇಕು’ ಎಂದು ಆ ಭಾಗದ ಜನ ಆಗ್ರಹಿಸಿದ್ದಾರೆ.




