ಭಟ್ಕಳ: ಚಿತ್ರಕಲಾ ಗ್ರೇಡ್ ಪರೀಕ್ಷೆಯ ಮೌಲ್ಯಮಾಪನಕ್ಕಾಗಿ ಹೊರಟಿದ್ದ ಶಿಕ್ಷಕರ ಕಾರು ಅಪಘಾತವಾಗಿದೆ.
ಹೊನ್ನಾವರದಿಂದ ಮಾವಿನಗುಂಡಿ ಮಾರ್ಗವಾಗಿ ಬುಧವಾರ ಮಧ್ಯಾಹ್ನ ಆರು ಶಿಕ್ಷಕರು ದಾವಣಗೆರೆಗೆ ಹೊರಟಿದ್ದರು. ಮಾವಿನಗುಂಡಿಯಿoದ ಮುಂದೆ ಚಲಿಸುತ್ತಿರುವಾಗ ಅವರ ಕಾರು ಅಪಘಾತವಾಯಿತು. ಕಾರಿನಲ್ಲಿದ್ದ ಮಂಜುನಾಥ ದೇವಾಡಿಗ ಸ್ಥಳದಲ್ಲಿಯೇ ಸಾವನಪ್ಪಿದರು.
ಈ ಅಪಘಾತದಲ್ಲಿ ಮತ್ತೆ ಐದು ಶಿಕ್ಷಕರು ಗಾಯಗೊಂಡಿದ್ದು, ಅವರನ್ನು ಸಿದ್ದಾಪುರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗಾಗಿ ಬೇರೆ ಬೇರೆ ಕಡೆ ಸಾಗಿಸಲಾಗಿದೆ. ಅಪಘಾತಕ್ಕೆ ಒಳಗಾದ ಎಲ್ಲರೂ ಭಟ್ಕಳ ತಾಲೂಕಿನ ಚಿತ್ರಕಲಾ ಶಿಕ್ಷಕರಾಗಿದ್ದಾರೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ತಿರುವಿನಲ್ಲಿ ಪಲ್ಟಿಯಾಗಿದೆ. ನಂತರ ಕಾರು ಮರಕ್ಕೆ ಹೋಗಿ ಗುದ್ದಿದೆ. ಕಾರು ಮರಕ್ಕೆ ಗುದ್ದಿದ ರಭಸಕ್ಕೆ ಮಂಜುನಾಥ ದೇವಾಡಿಗ ಅವರು ಸಾವನಪ್ಪಿದ್ದಾರೆ.
ಈ ಕಾರಿನಲ್ಲಿ ಸಂಚರಿಸುತ್ತಿದ್ದ ಶಿಕ್ಷಕ ಚನ್ನವೀರಪ್ಪ ಹೊಸ್ಮನಿ ಅವರಿಗೂ ಸೊಂಟಕ್ಕೆ ಪೆಟ್ಟಾಗಿದೆ. ಚನ್ನವೀರಪ್ಪ ಹೊಸ್ಮನಿ S News ಡಿಜಿಟಲ್ ಸಂಪರ್ಕಕ್ಕೆ ಸಿಕ್ಕಿದ್ದು, `ಇಬ್ಬರು ಶಿಕ್ಷಕರು ಹೆಚ್ಚಿನ ಚಿಕಿತ್ಸೆಗಾಗಿ ಚಿನ್ಮಯಿ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಹೋಗುತ್ತಿದ್ದೇವೆ’ ಎಂದು ತಿಳಿಸಿದರು.
`ಸಿದ್ದಾಪುರ ಮಾರ್ಗವಾಗಿ ಕಾರು ಸಂಚರಿಸುತ್ತಿತ್ತು. ತಿರುವಿನಲ್ಲಿ ಕಾರು ಕಟ್ ಆಗಲಿಲ್ಲ. ಇದರಿಂದ ಒಮ್ಮೆಲೆ ರಸ್ತೆ ಬಿಟ್ಟು ಕೆಳಗೆ ಬಿದ್ದಿತು. ಕಾರಿನ ಒಳಗಿದ್ದ ತಮ್ಮನ್ನು ಸೇರಿ ಸಂದೇಶ ಶೆಟ್ಟಿ, ನಾರಾಯಣ ಮೊಗೇರ್, ಚನ್ನವಿರಪ್ಪ ಹೊಸಮನಿ, ಸಾಧೀಕ ಶೇಖ್ ಹಾಗೂ ಮಹೇಶ ನಾಯ್ಕ ಗಾಯಗೊಂಡಿದ್ದಾರೆ’ ಎಂದವರು ತಿಳಿಸಿದರು.




