ಮುಂಡಗೋಡ: ತಮ್ಮ ಒಡನಾಡಿಯಾಗಿದ್ದ ಎತ್ತು ಸಾವನಪ್ಪಿದ ಸಂಗತಿ ಸಹಿಸಿಕೊಳ್ಳದ ಬೀರು ಎಡಗೆ ಆ ಎತ್ತು ವಾಸವಾಗಿದ್ದ ಕೊಟ್ಟಿಗೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮುಂಡಗೋಡ ಯರಬೈಲಿನ ಬಸನಾಳದ ಬೀರು ಬಿಚ್ಚು ಎಡಗೆ (42) ಐದು ವರ್ಷದ ಹಿಂದೆ ಎರಡು ಎತ್ತುಗಳನ್ನು ಖರೀದಿಸಿದ್ದರು. ಅತ್ಯಂತ ಪ್ರೀತಿಯಿಂದ ಅವುಗಳನ್ನು ಸಾಕುತ್ತಿದ್ದರು. ಬೀರು ಎಡಗೆ ಕೂಲಿ ಮಾಡಿ ಬದುಕು ಕಟ್ಟಿಕೊಂಡಿದ್ದರೂ ಎತ್ತುಗಳ ಆರೈಕೆ ವಿಷಯದಲ್ಲಿ ಕೊಂಚವೂ ಏರುಪೇರಾಗದಂತೆ ನೋಡಿಕೊಂಡಿದ್ದರು.
ಸೋಮವಾರ ಎರಡು ಎತ್ತುಗಳು ಮೇವಿಗೆ ತೆರಳಿದಾಗ ಒಂದು ಎತ್ತಿಗೆ ಹಾವು ಕಚ್ಚಿತು. ಪರಿಣಾಮ ಆ ಎತ್ತು ಸಾವನಪ್ಪಿತು. ಸಂಜೆಯಾದರು ಎತ್ತು ಮನೆಗೆ ಬಾರದ ಕಾರಣ ಹುಡುಕಾಟ ನಡೆಸಿದ ಬೀರು ಎಡಗೆಗೆ ಎತ್ತಿನ ಸಾವು ದೊಡ್ಡ ಆಘಾತ ತಂದಿತ್ತು. ಇಡೀ ದಿನ ಅದೇ ನೋವಿನಲ್ಲಿದ್ದ ಬೀರು ಎಡಗೆ ಮಂಗಳವಾರ ರಾತ್ರಿ ಆ ಎತ್ತು ವಾಸಿಸುತ್ತಿದ್ದ ಕೊಟ್ಟಿಗೆಗೆ ತೆರಳಿ ಅಲ್ಲಿ ನೇಣಿಗೆ ಶರಣಾದರು.
ಮಾಲಕ ಬೀರು ಎಡಗೆ ಅವರ ಸಾವಿನಿಂದ ಇನ್ನೊಂದು ಎತ್ತು ಸಹ ಸೊರಗಿದೆ. ಎತ್ತುಗಳನ್ನು ಅತಿಯಾಗಿ ಹಚ್ಚಿಕೊಂಡಿದ್ದ ಬೀರು ಅವರ ಆತ್ಮಹತ್ಯೆಯ ಬಗ್ಗೆ ಅವರ ಪತ್ನಿ ಭಾಗುಬಾಯಿ ಎಡಿಗೆ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.





