ಕುಮಟಾ: ಜನತಾ ಕಾಲೋನಿಯಿಂದ ಮಾಸೂರು ಕ್ರಾಸಿನ ರಸ್ತೆಯಲ್ಲಿ ಪದೇ ಪದೇ ಅಪಘಾತವಾಗುತ್ತಿದೆ. ಶಾಲೆ, ಅಂಗನವಾಡಿ, ರೆಸಾರ್ಟ ಸೇರಿ ಹಲವು ಮುಖ್ಯ ಕಚೇರಿಗಳನ್ನು ಹೊಂದಿದ ಈ ರಸ್ತೆಯಲ್ಲಿನ ಅಪಘಾತದಿಂದ ಈಚೆಗೆ ಸಾವು-ನೋವುಗಳು ಹೆಚ್ಚಾಗುತ್ತಿವೆ. `ರಸ್ತೆ ಸುರಕ್ಷತೆಗೆ ಕ್ರಮ ಜರುಗಿಸಿ’ ಎಂದು ಲೋಕೋಪಯೋಗಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರೂ ಯಾವುದೇ ಬೆಳವಣಿಗೆಯಾಗಿಲ್ಲ. ಈ ಹಿನ್ನಲೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಸಚಿವರಿಗೆ ದೂರು ಸಲ್ಲಿಸಿದ್ದಾರೆ.
ಜನತಾ ಫ್ಲೋಟ್ ಮಾಸೂರ್ ಕ್ರಾಸ್ ಗ್ರಾಮದ ರಸ್ತೆ ಅಘಾನಶಿನಿ ತಲುಪಿ ತದಡಿ ಮಾರ್ಗವಾಗಿ ಗೋಕರ್ಣದ ಸಂಪರ್ಕ ಬೆಸೆಯುತ್ತದೆ. 40ಕ್ಕೂ ಅಧಿಕ ರೆಸಾರ್ಟಗಳು ಈ ರಸ್ತೆಗೆ ಹೊಂದಿಕೊoಡಿವೆ. ರೆಸಾರ್ಟಗೆ ಬರುವ ಅಪರಿಚಿತ ವಾಹನಗಳು ಅಪಘಾತಗಳಿಗೆ ಮೂಲ ಕಾರಣ. ನೊಂದಣಿ ಸಂಖ್ಯೆ ಸಹ ಇಲ್ಲದ ವಾಹನಗಳು ಈ ಭಾಗದಲ್ಲಿ ಓಡಾಡುವುದರಿಂದ ಅನೇಕ ಬಾರಿ ಅಪಘಾತಕ್ಕೆ ಕಾರಣ ಯಾರು? ಎಂದು ಸಹ ಗೊತ್ತಾಗುತ್ತಿಲ್ಲ. ಈ ರಸ್ತೆ ಅಂಚಿನಲ್ಲಿ ಶಾಲೆ-ಅಂಗನವಾಡಿಗಳಿದ್ದರೂ `ನಿಧಾನವಾಗಿ ಚಲಿಸಿ’ ಎಂಬ ಸೂಚನಾ ಫಲಕವಿಲ್ಲ. ರಸ್ತೆ ಸುರಕ್ಷತೆಗೆ ಒತ್ತು ನೀಡುವಂತೆ 2024ರ ಏಪ್ರಿಲ್ ಅಂತ್ಯದಲ್ಲಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಅದಾಗಿ 7 ತಿಂಗಳ ನಂತರ ಜಿಲ್ಲಾಧಿಕಾರಿಗಳಿಗೂ ಈ ಬಗ್ಗೆ ಪತ್ರ ಬರೆದಿದ್ದರು. ಆ ವೇಳೆ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮಕ್ಕಾಗಿ ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಲೋಕೋಪಯೋಗಿ ಇಲಾಖೆಯವರು ಯಾವುದೇ ಕ್ರಮ ಜರುಗಿಸದ ಕಾರಣ ಅಪಘಾತಗಳು ಮುಂದುವರೆದಿದ್ದವು.
`ರಸ್ತೆ ಸುರಕ್ಷತೆಗೆ ಕ್ರಮ ಜರುಗಿಸದಿರುವುದು, ಶಾಲಾ ವಲಯದಲ್ಲಿ ಸೂಚನಾ ಫಲಕ ಅಳವಡಿಸದಿರುವುದರಿಂದ ಅಪಘಾತ ಪ್ರಮಾಣ ಹೆಚ್ಚಾಗಿದೆ. ಕುಮಟಾ ಲೋಕೋಪಯೋಗಿ ಸಹಾಯಕ ಅಭಿಯಂತರು ಇದಕ್ಕೆ ಕಾರಣ’ ಎಂದು ದೂರಿ ಇದೀಗ ಸಚಿವರಿಗೆ ಪತ್ರ ರವಾನೆಯಾಗಿದೆ. ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಸಾಮಾಜಿಕ ಕಾರ್ಯಕರ್ತ ಸುಧಾಕರ್ ನಾಯ್ಕ, ಪ್ರಕಾಶ್ ಪಟಗಾರ್ ಹಾಗೂ ವೆಂಕ್ರಮಣ ಪಟಗಾರ ಅವರು ಕುಮಟಾ ಉವಿಭಾಗಾಧಿಕಾರಿ ಕಚೇರಿ ಮೂಲಕ ದೂರು ಸಲ್ಲಿಸಿದರು.




