ಮುಂಡಗೋಡ: ಶಿರಸಿ – ಹುಬ್ಬಳ್ಳಿ ರಸ್ತೆಯ ನಂದಿಪುರ ಗ್ರಾಮದಲ್ಲಿ ಸಂಚರಿಸುವ ವಾಹನಗಳು ಪದೇ ಪದೇ ಅಪಘಾತವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ರಸ್ತೆ ಅಂಚಿನಲ್ಲಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್. ಶನಿವಾರ ಸಹ VRL ಬಸ್ಸು ವಿದ್ಯುತ್ ಟ್ರಾನ್ಸ್ಫಾರ್ಮರ್’ಗೆ ಗುದ್ದಿದೆ. ಹೆಸ್ಕಾಂ ಹಾಗೂ VRL ಸಿಬ್ಬಂದಿ ನಡುವಿನ ಜಟಾಪಟಿಯಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದರು.
ಮುಂಡಗೋಡು ತಾಲೂಕಿನ ಕಾತೂರು ಗ್ರಾ ಪಂ ವ್ಯಾಪ್ತಿಯ ನಂದಿಪುರದಲ್ಲಿ ರಸ್ತೆಯ ಒಂದು ಕಡೆ ವಿದ್ಯುತ್ ಕಂಬವಿದೆ. ಅದಕ್ಕೆ ನೇರವಾಗಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಅಳವಡಿಸಲಾಗಿದೆ. ಬಸ್ಸು ಸೇರಿ ಭಾರೀ ಗಾತ್ರದ ವಾಹನಗಳ ಓಡಾಟಕ್ಕೆ ವಿದ್ಯುತ್ ಟ್ರಾನ್ಸ್ಫಾರ್ಮರ್ ಅಡ್ಡಿಯಾಗುತ್ತಿದೆ. ಹುಲ್ಲಿನ ಗಾಡಿಗಳು ಸಹ ಇಲ್ಲಿ ಅಪಘಾತಕ್ಕೀಡಾಗುತ್ತಿವೆ.
ಈ ರಸ್ತೆ ಮಾರ್ಗವಾಗಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಶಾಲಾ-ಕಾಲೇಜು ಮಕ್ಕಳು ಸಂಚರಿಸುತ್ತಾರೆ. ರಸ್ತೆಗೆ ತಾಗಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಇರುವುದರಿಂದ ಅಪಘಾತ ನಡೆದಲ್ಲಿ ಅವರೆಲ್ಲರೂ ಅಪಾಯಕ್ಕೆ ಸಿಲುಕುತ್ತಾರೆ. ಪದೇ ಪದೇ ಅಪಘಾತವಾಗುತ್ತಿರುವುದರಿಂದ ವಿದ್ಯುತ್ ಟ್ರಾನ್ಸ್ಫಾರ್ಮರ್’ನ್ನು ಸ್ಥಳಾಂತರಿಸಬೇಕು ಎಂದು ಆ ಭಾಗದವರು ಅನೇಕ ಸಲ ಒತ್ತಾಯಿಸಿದ್ದಾರೆ. ಆದರೆ, ಈವರೆಗೂ ಆ ಒತ್ತಾಯಕ್ಕೆ ಹೆಸ್ಕಾಂ ತಲೆಕೆಡಿಸಿಕೊಂಡಿರಲಿಲ್ಲ.
ಶನಿವಾರ ಬೆಳಗ್ಗೆ ವಿದ್ಯುತ್ ಟ್ರಾನ್ಸ್ಫಾರ್ಮರ್’ಗೆ ಬಸ್ಸು ಗುದ್ದಿದ ಕಾರಣ ಬಸ್ಸಿನ ಗಾಜುಗಳಿಗೆಲ್ಲ ಕಬ್ಬಿಣದ ಚೂರುಗಳು ಸಿಕ್ಕಿಹಾಕಿಕೊಂಡಿದ್ದವು. ಬಸ್ಸು ಗುದ್ದಿದ ರಭಸಕ್ಕೆ ವಿದ್ಯುತ್ ಟ್ರಾನ್ಸ್ಫಾರ್ಮರ್’ನ ಜಿಓಸಿ ಸಹ ತುಂಡಾಗಿದ್ದು, ಹೆಸ್ಕಾಂ ಸಿಬ್ಬಂದಿ ಅದನ್ನು ಮರು ಜೋಡಿಸಿದರು. `ವಿದ್ಯುತ್ ಟ್ರಾನ್ಸ್ಫಾರ್ಮರ್ ಸ್ಥಳಾಂತರ ಬಗ್ಗೆ ಜನ ಆಗ್ರಹಿಸಿದ್ದು, ಸೋಮವಾರ ಸ್ಥಳ ಪರಿಶೀಲನೆ ನಡೆಸುವೆ. ಅಪಾಯ ನಡೆಯದಂತೆ ಮುನ್ನಚ್ಚರಿಕಾ ಕ್ರಮವಾಗಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಸ್ಥಳಾಂತರಿಸುವ ಪ್ರಯತ್ನ ನಡೆಸುವೆ’ ಎಂದು ಮಳಗಿಯ ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.




