ಶಿರಸಿ: ತೇಲಂಗ ಸಹ್ಯಾದ್ರಿ ಪ್ರೌಢಶಾಲೆಯ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸೈನಿಕರೊಬ್ಬರಿಗೆ ಅದೇ ಶಾಲೆಯ ಮಾಜಿ ಶಿಕ್ಷಕರೊಬ್ಬರು ಕೆನ್ನೆಗೆ ಹೊಡೆದಿದ್ದಾರೆ. ಹೀಗೆ ಹೊಡೆದಿದ್ದು ಸಿಟ್ಟಿನಿಂದ ಇಲ್ಲ.. ಅಪಾರವಾದ ಪ್ರೀತಿಯಿಂದ!
1973ರಲ್ಲಿ ತೇಲಂಗ ಸಹ್ಯಾದ್ರಿ ಪ್ರೌಢಶಾಲೆಗೆ ಬಂದ ಎಸ್ ಎಸ್ ಭಟ್ಟ ಅವರು 2011ರವರೆಗೂ ಮಕ್ಕಳಿಗೆ ಪಾಠ ಮಾಡಿದರು. ಅತ್ಯಂತ ಶಿಸ್ತು ಹಾಗೂ ಗಂಭೀರವಾಗಿ ವರ್ತಿಸುತ್ತಿದ್ದ ಅವರನ್ನು ನೋಡಿದರೆ ವಿದ್ಯಾರ್ಥಿಗಳೆಲ್ಲರೂ ನಡುಗುತ್ತಿದ್ದರು. ಎಸ್ ಎಸ್ ಭಟ್ಟ ಅವರು ಪಠ್ಯ ವಿಷಯದಲ್ಲಿ ಅತ್ಯಂತ ಅಚ್ಚುಕಟ್ಟು. ಬದುಕಿನಲ್ಲಿಯೂ ಅಷ್ಟೇ ಶಿಸ್ತಿನ ಮನುಷ್ಯ. ಹಿಂದುಳಿದ ಮಕ್ಕಳನ್ನು ಸಹ ಮುಖ್ಯವಾಹಿನಿಗೆ ತರಬೇಕು ಎಂಬುವುದೊoದೇ ಅವರ ಧ್ಯೇಯ. ನೇರ ವ್ಯಕ್ತಿತ್ವದ ಅವರು ಕಲಿಕೆ ವಿಷಯದಲ್ಲಿ ಎಂದಿಗೂ ರಾಜಿ ಆದವರಲ್ಲ. ಅಧ್ಯಯನ ಇಲ್ಲದೇ ತರಗತಿ ಪ್ರವೇಶಿಸಿದವರಲ್ಲ. ಹೀಗಾಗಿ ಎಷ್ಟೇ ಪ್ರಭಾವಿ ವ್ಯಕ್ತಿಗಳ ಮಕ್ಕಳಾಗಿದ್ದರೂ ಎಸ್ ಎಸ್ ಭಟ್ಟ ಅವರ ಏಟಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ.
ತೆಲಂಗ ಶಾಲೆಗೆ 8ನೇ ತರಗತಿ ಪ್ರವೇಶ ಪಡೆದ ಗೋಪಾಲ ಪಟಗಾರ ಅವರಿಗೆ ಇಂಗ್ಲಿಷ್ ಸರಿಯಾಗಿ ಬರುತ್ತಿರಲಿಲ್ಲ. ಹೀಗಾಗಿ ಗೋಪಾಲ ಪಟಗಾರ ಅವರಿಗೂ ಎಸ್ ಎಸ್ ಭಟ್ಟ ಅವರ ಹೊಡೆತ ತಪ್ಪಿರಲಿಲ್ಲ. ಮೂರು ವರ್ಷಗಳ ಕಾಲವೂ ಶಿಕ್ಷಕರಿಂದ ಪೆಟ್ಟು ತಿನ್ನುತ್ತಲೇ ವಿದ್ಯೆ ಕಲಿತ ಗೋಪಾಲ ಪಟಗಾರ ಅವರು SSLC ಮುಗಿದ ನಂತರ ITI ಓದಿದರು. ಗುರುಗಳು ಹೇಳಿಕೊಟ್ಟ ದಾರಿಯಲ್ಲಿ ನಡೆದು ಆರ್ಮಿ ಸೇರಿದರು. ವಾಯು ರಕ್ಷಾ ದಳ ವಿಭಾಗದಲ್ಲಿ 17 ವರ್ಷ ದೇಶದ ವಿವಿಧ ಕಡೆ ಸೇವೆ ಸಲ್ಲಿಸಿದರು. ಗೋಪಾಲ ಪಟಗಾರ ಅವರು ನಿವೃತ್ತಿ ನಂತರವೂ ಪರೀಕ್ಷೆ ಎದುರಿಸಿ ಯಲ್ಲಾಪುರ ನ್ಯಾಯಾಲಯದ ಉದ್ಯೋಗಿಯಾದರು. ಮತ್ತೊಂದು ಪರೀಕ್ಷೆ ಎದುರಿಸಿ ಗ್ರಾಮ ಪಂಚಾಯತ ಸೇವೆಗೆ ಸೇರಿ ಪ್ರಸ್ತುತ ಅವರು ಶಿರಸಿಯ ಗುಡ್ನಾಪುರದಲ್ಲಿ ಪಿಡಿಓ ಆಗಿ ಕೆಲಸ ಮಾಡುತ್ತಿದ್ದಾರೆ.
ಪ್ರಸ್ತುತ ಶನಿವಾರ ತೇಲಂಗ ಸಹ್ಯಾದ್ರಿ ಪ್ರೌಢಶಾಲೆಯಲ್ಲಿ 1989ನೇ ಸಾಲಿನ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ನಡೆಯಿತು. ಆ ಅವಧಿಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಬಂದಿದ್ದರು. ಶಿಕ್ಷಕರಾಗಿದ್ದ ಎಸ್ ಎಸ್ ಭಟ್ಟ ಅವರು ತಮ್ಮ ಗಂಭೀರ ಶೈಲಿಯಲ್ಲಿಯೇ ವೇದಿಕೆ ಏರಿದ್ದರು. ತರಗತಿಯಲ್ಲಿಯೂ ಕಿಲಾಡಿ ಮಾಡುತ್ತಿದ್ದ ಗೋಪಾಲ ಪಟಗಾರ ಅವರು ವೇದಿಕೆಯಲ್ಲಿಯೂ ಕಿಲಾಡಿ ಪ್ರಶ್ನೆ ಕೇಳಿದ್ದು, ಹಳೆಯದನ್ನು ನೆನಪಿಸಿಕೊಂಡ ಎನ್ ಎಸ್ ಭಟ್ಟ ಅವರು ಗೋಪಾಲ ಪಟಗಾರ ಅವರ ಕೆನ್ನೆಗೆ ಮೆತ್ತಗೆ ಬಾರಿಸಿದರು. ಗೋಪಾಲ ಪಟಗಾರ ಅವರು ಸಹ ಎನ್ ಎಸ್ ಭಟ್ಟ ಅವರು ಕೊಟ್ಟ ಏಟನ್ನು ಪ್ರೀತಿಯಿಂದಲೇ ಸ್ವೀಕರಿಸಿದರು.




