ಯಲ್ಲಾಪುರ: ನಾಯ್ಕನಕೆರೆಯ ದತ್ತ ಮಂದಿರ ಲೋಕಾರ್ಪಣೆಯಾಗಿದ್ದು, ದತ್ತ ಮಂದಿರದ ಪಕ್ಕದಲ್ಲಿಯೇ ಭಿಕ್ಷಾ ಮಂದಿರ ನಿರ್ಮಿಸಲು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಸಂಕಲ್ಪಿಸಿದ್ದಾರೆ. ಭಿಕ್ಷಾ ಮಂದಿರದ ಮಧ್ಯಭಾಗದಲ್ಲಿ ದತ್ತ ಪಾದುಕೆಯನ್ನಿಟ್ಟು ಅದರ ಸುತ್ತಲು ಭಕ್ತರಿಗೆ ಕೂರುವ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇಲ್ಲಿ ಪೂಜೆ, ಭಜನೆ ಜೊತೆ ಒಂದು ಹಿಡಿ ಅಕ್ಕಿಯಿಂದಲೂ ಭಕ್ತರು ದತ್ತ ಸನ್ನಿಧಿಗೆ ಭಿಕ್ಷೆ ನೀಡಬಹುದಾಗಿದೆ.
ಶನಿವಾರ ಸಂಜೆ ದತ್ತ ಮಂದಿರ ಲೋಕಾರ್ಪಣೆ ನಂತರ ಆಶೀರ್ವಚನ ನೀಡಿದ ರಾಘವೇಶ್ವರ ಭಾರತೀ ಸ್ವಾಮೀಜಿ ಈ ವಿಷಯ ಪ್ರಕಟಿಸಿದರು. `ಈಗಾಗಲೇ ದೇವಾಲಯದ ಒಳಗೆ ದತ್ತನ ಪಾದುಕೆಯಿದೆ. ಆದರೆ, ಅಲ್ಲಿ ಎಲ್ಲರಿಗೂ ಪ್ರವೇಶವಿಲ್ಲ. ಹೀಗಾಗಿ ದತ್ತನ ಪಾದುಕೆಗೆ ಪೂಜೆ ಸಲ್ಲಿಸಬೇಕು ಎನ್ನುವವರಿಗಾಗಿ ದೇವಾಲಯ ಆವರಣದಲ್ಲಿ ಭಿಕ್ಷಾ ಮಂದಿರ ಕಟ್ಟಲಾಗುತ್ತದೆ. ಇದಕ್ಕೆ ಪಾದುಕಾ ಮಂದಿರ ಎಂದೂ ಕರೆಯಬಹುದಾಗಿದ್ದು, ಎಲ್ಲರಿಗೂ ಕೈಗೆಟಕುವ ಹಾಗೇ ಸ್ವಲ್ಪ ಎತ್ತರದಲ್ಲಿ ಪಾದುಕೆಗಳನ್ನಿರಿಸಲಾಗುತ್ತದೆ’ ಎಂದು ಅವರು ವಿವರಿಸಿದರು.
`ಭಿಕ್ಷಾ ಮಂದಿರದಲ್ಲಿನ ಪಾದುಕೆಗೆ ಪೂಜೆ ಸಲ್ಲಿಸಿದ ನಂತರ ಭಕ್ತರು ಅಲ್ಲಿ ಕುಳಿತು ಭಜನೆ ಮಾಡಬಹುದು. ಗುರು ಚರಿತ್ರೆಯ ಪಾರಾಯಣ ಪಠಿಸಬಹುದು. ಒಂದು ಹಿಡಿ ಅಕ್ಕಿ, ತೆಂಗಿನಕಾಯಿ, ನೆಲ್ಲಿಕಾಯಿಯಿಂದ ಹಿಡಿದು ಮನಸ್ಸಿಗೆ ತೋಚಿದ ಸಾತ್ವಿಕ ವಸ್ತುಗಳನ್ನು ಇಲ್ಲಿ ಕೊಡಬಹುದು. ದತ್ತನಿಗೆ ಇದೀಗ ಮಂದಿರ ನೆರಳು ನೀಡಿದ್ದು, ದತ್ತನ ಭಕ್ತರಿಗೂ ನೆರಳು ನೀಡುವ ಉದ್ದೇಶ ಈ ಭಿಕ್ಷಾ ಮಂದಿರದ್ದಾಗಿದೆ’ ಎಂದು ಹೇಳಿದರು. `ದತ್ತ ಮಂದಿರದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳಿವೆ. ಮಠದಿಂದ ಆರ್ಥಿಕ ನೆರವು ಪಡೆಯದೇ ಇಲ್ಲಿ ದತ್ತ ಮಂದಿರ ನಿರ್ಮಿಸಲಾಗಿದ್ದು, ಭವಿಷ್ಯದಲ್ಲಿ ಭಿಕ್ಷಾ ಮಂದಿರದಲ್ಲಿನ ಕಾಣಿಕೆಗಳಿಂದಲೇ ಇನ್ನಷ್ಟು ಅಭಿವೃದ್ಧಿ ಕೆಲಸಗಳಾಗಲಿದೆ’ ಎಂಬ ವಿಶ್ವಾಸವ್ಯಕ್ತಪಡಿಸಿದರು.
ದತ್ತ ಜಯಂತಿ ವೇಳೆ ಒಲೆ ಉರಿಸುವ ಹಾಗಿಲ್ಲ!
`ದತ್ತ ಜಯಂತಿಯ ವೇಳೆ ಯಾರೂ ಮನೆಯಲ್ಲಿ ಒಲೆ ಉರಿಸುವ ಹಾಗಿಲ್ಲ. ಮೂರು ಹೊತ್ತು ದತ್ತ ಸನ್ನಿಧಿಗೆ ಬಂದು ಪ್ರಸಾದ ಸ್ವೀಕರಿಸಬೇಕು’ ಎಂದು ರಾಘವೇಶ್ವರ ಶ್ರೀಗಳು ಹೇಳಿದರು. `ದತ್ತ ಮಂದಿರವನ್ನು ಎಲ್ಲರೂ ತಮ್ಮ ಮನೆ ಎಂದು ಭಾವಿಸಬೇಕು. ಪ್ರತಿ ವರ್ಷ ದತ್ತ ಜಯಂತಿ ಮುನ್ನ ದತ್ತ ಯಾತ್ರೆ ನಡೆಯಬೇಕು. ಪ್ರತಿ ಮನೆ ಬಾಗಿಲಿಗೂ ದತ್ತನ ರಥ ಹೋಗಬೇಕು’ ಎಂದು ಹೇಳಿದರು. ಇನ್ನೂ `ದತ್ತ ಮಂದಿರಕ್ಕೆ ಬಾಗಿಲು ಇಲ್ಲ. ಹೀಗಾಗಿ ಇದು ಮನುಷ್ಯರಿಗೆ ಮಾತ್ರವಲ್ಲದೇ, ಸರ್ವ ಜೀವಿಗಳಿಗೂ ಆಶ್ರಯ ತಾಣ’ ಎಂದರು.




