ಯಲ್ಲಾಪುರ: ದಿಢೀರ್ ಹೃದಯಘಾತದಿಂದ ಸಾವನಪ್ಪಿದ ಶಿಕ್ಷಕ ನಾರಾಯಣ ನಾಯಕ ಅವರು ಸಾವಿನ ನಂತರವೂ ಶಿಕ್ಷಕರ ಮನದಾಳದಲ್ಲಿ ಬದುಕಿದ್ದಾರೆ. ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ವೇದಿಕೆಗೆ ಅವರ ಹೆಸರಿಟ್ಟಿರುವುದೇ ಇದಕ್ಕೆ ಸಾಕ್ಷಿ!
ಶಿಕ್ಷಣ ಇಲಾಖೆ ನಡೆಸುವ ಯಾವ ಕಾರ್ಯಕ್ರಮದಲ್ಲಿಯೂ ವೇದಿಕೆಗೆ ಹೆಸರಿಡುವ ಪದ್ಧತಿ ಇರಲಿಲ್ಲ. ಅದಾಗಿಯೂ ಶಿರಸಿ ಶಿಕ್ಷಣ ಜಿಲ್ಲೆಯ ಉಪನಿರ್ದೇಶಕ ಪಾರಿ ಬಸವರಾಜ್ ಅವರು ಪ್ರತಿಭಾ ಕಾರಂಜಿಯ ಪೂರ್ವಭಾವಿ ಸಭೆಯಲ್ಲಿ ವೇದಿಕೆಗೆ ನಾರಾಯಣ ನಾಯಕ ಅವರ ಹೆಸರಿಡುವ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕೆ ಎಲ್ಲರೂ ಒಮ್ಮತದ ಒಪ್ಪಿಗೆ ನೀಡಿದರು. `ನಾರಾಯಣ ನಾಯಕ ಅವರು ಯಲ್ಲಾಪುರದವರಾಗಿದ್ದು, ಯಲ್ಲಾಪುರದಲ್ಲಿಯೇ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ನಡೆಯುತ್ತಿರುವ ಹಿನ್ನಲೆ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿದ್ದ ಅವರ ಹೆಸರಿಡುವುದು ಸೂಕ್ತ’ ಎಂದು ಸಭೆ ನಿರ್ಣಯಿಸಿತು.
ಶನಿವಾರ ನಡೆದ ಪ್ರತಿಭಾ ಕಾರಂಜಿಗೆ ಆಗಮಿಸಿದ ಬಹುತೇಕರು ನಾರಾಯಣ ನಾಯಕರನ್ನು ವೇದಿಕೆ ಮುಂದೆ ಕಂಡರು. ನಾರಾಯಣ ನಾಯಕರನ್ನು ಸ್ಮರಿಸಿ ಶೈಕ್ಷಣಿಕ ಸಂಘಟನೆಗೆ ಅವರು ನೀಡಿದ ಕೊಡುಗೆಗಳ ಬಗ್ಗೆ ಗುಣಗಾನ ಮಾಡಿದರು. ಪ್ರಸ್ತುತ ಶನಿವಾರ ಯಲ್ಲಾಪುರದ ವೈಟಿಎಸ್ಎಸ್ ಆವರಣದಲ್ಲಿ ಪ್ರತಿಭಾ ಕಾರಂಜಿ ನಡೆದಿದ್ದು, ನಾರಾಯಣ ನಾಯಕ ಅವರ ಸ್ಮರಣೆ ನಡೆಯಿತು. ಪ್ರತಿಭಾ ಕಾರಂಜಿ ಅನಾವರಣದ ವೇದಿಕೆಗೂ ನಾರಾಯಣ ನಾಯಕ ಅವರ ಹೆಸರಿಡುವ ಮೂಲಕ ಶಿಕ್ಷಣ ಇಲಾಖೆ ಅವರ ಸೇವೆಯನ್ನು ಗೌರವಿಸಿತು.
ಎಲ್ಲರ ಜೊತೆ ಅನ್ಯೋನ್ಯವಾಗಿದ್ದ ನಾರಾಯಣ ನಾಯಕ ವಿವಿಧ ಹಂತದ ಅಧಿಕಾರಿಗಳ ಜೊತೆ ಒಡನಾಟ ಹೊಂದಿದ್ದರು. ಹೀಗಾಗಿ ಅವರು ಶಿಕ್ಷಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುತ್ತಿದ್ದರು. ಪ್ರತಿಭಾ ಕಾರಂಜಿ ಸೇರಿ ವಿವಿಧ ಕಾರ್ಯಕ್ರಮಗಳ ಸಂಘಟನೆಗಾಗಿ ಅವರು ಶ್ರಮಿಸುತ್ತಿದ್ದರು. ಜಿಲ್ಲಾ ಮಟ್ಟದಲ್ಲಿಯೂ ಸಾಕಷ್ಟು ಸಂಘಟನಾತ್ಮಕ ಕೆಲಸ ಮಾಡಿದ್ದರು. ಇದೇ ಕಾರಣದಿಂದ ಒಕ್ಕೂರಲಿನಿಂದ ಶಿಕ್ಷಕರು ಅವರನ್ನು ಬೆಂಬಲಿಸುತ್ತಿದ್ದರು. ನಾರಾಯಣ ನಾಯಕ ಅವರು ಶಿರಸಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾಗಿದ್ದರು. ಅಕ್ಟೊಬರ್ 30ರಂದು ಅವರು ತಮ್ಮ 57ನೇ ವಯಸ್ಸಿನಲ್ಲಿ ಕೊನೆ ಉಸಿರೆಳೆದಿದ್ದರು.




