ಮುಂಡಗೋಡ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಜೋರಾಗಿದೆ. ಸಾರ್ವಜನಿಕರ ದೂರಿನ ಮೇರೆಗೆ ಪಟ್ಟಣ ಪಂಚಾಯತದಿoದ ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆ ನಡೆಯುತ್ತಿದೆ. ಇದರೊಂದಿಗೆ ಬೀದಿ ನಾಯಿಗಳಿಗೆ ಲಸಿಕೆಯನ್ನು ಹಾಕಲಾಗುತ್ತಿದೆ.
ಸೋಮವಾರದಿಂದಲೇ `ಆಪರೇಶನ್ ಬೌ ಬೌ’ ಕಾರ್ಯಾಚರಣೆ ಶುರುವಾಗಿದೆ. ಬೀದಿಯಲ್ಲಿ ಅಲೆಯುತ್ತಿರುವ ನಾಯಿಗಳನ್ನು ಹಿಡಿಯುವುದು ಕಾರ್ಯಾಚರಣೆ ನಡೆಸುವವರಿಗೆ ಸವಾಲಾಗಿದೆ. ಅದಾಗಿಯೂ ನಾಯಿಗಳನ್ನು ಹಿಡಿದು ಸಂತಾನ ಹರಣ ಚಿಕಿತ್ಸೆ ನಡೆಸಲಾಗುತ್ತಿದೆ.
ನಿಯಮಗಳ ಪ್ರಕಾರ ನಾಯಿಗಳನ್ನು ಎಲ್ಲಿ ಹಿಡಿದಿದ್ದಾರೆಯೋ ಅಲ್ಲಿಯೇ ಬಿಡಬೇಕು. ಹೀಗಾಗಿ ಒಂದೊoದೇ ವಾರ್ಡಿನ ನಾಯಿಗಳನ್ನು ಹಿಡಿದು ಚಿಕಿತ್ಸೆಗೆ ಕರೆದೊಯ್ಯಲಾಗುತ್ತಿದೆ. ಚಿಕಿತ್ಸೆ ಮುಗಿದ ನಂತರ ನಾಯಿಯ ಚಲನ-ವಲನದ ಮೇಲೆ ನಿಗಾವಿರಿಸಿ ನಂತರ ಅದೇ ವಾರ್ಡಿಗೆ ತಂದು ಬಿಡಲಾಗುತ್ತಿದೆ.
ಇನ್ನೂ ನಾಯಿ ಹಿಡಿಯುವುದನ್ನು ನೋಡಿ ಜನ ಸಂತಸ ವ್ಯಕ್ತಪಡಿಸಿದ್ದು, ನಾಯಿಯನ್ನು ಮರಳಿ ಬಿಡುವಾಗ ವಾಗ್ವಾದ ನಡೆಸುತ್ತಿದ್ದಾರೆ. ನಾಯಿ ಹಿಡಿಯುವ ಕಾರ್ಯಾಚರಣೆ ನಡೆಸುವವರಿಗೆ ಜನರನ್ನು ಸಮಾದಾನಪಡಿಸುವುದು ಸಹ ದೊಡ್ಡ ಸವಾಲಾಗಿದೆ.
ಬೀದಿ ನಾಯಿಗಳನ್ನು ಮಾತ್ರ ಗುರಿಯಾಗಿರಿಸಿಕೊಂಡು ಈ ಕಾರ್ಯಾಚರಣೆ ನಡೆಯುತ್ತಿದೆ. ಹೀಗಾಗಿ ಸಾಕು ನಾಯಿಗಳನ್ನು ಮನೆಯಲ್ಲಿಯೇ ಕಟ್ಟಿ ಹಾಕುವುದು ಉತ್ತಮ.




