ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಏಳು ಲಿಂಗತ್ವ ಅಲ್ಪ ಸಂಖ್ಯಾತರು ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಾಗಿದ್ದು, ತೃತೀಯ ಲಿಂಗಿಗಳಿಗೂ ಈ ಯೋಜನೆಯ ಹಣ ತಲುಪಿಸಲು ಸರ್ಕಾರ ಶ್ರಮಿಸುತ್ತಿದೆ. ಈ ಹಿನ್ನಲೆ ಅಂಥವರ ಹುಡುಕಾಟ ಮುಂದುವರೆದಿದೆ.
ರಾಜ್ಯ ಸರ್ಕಾರ ಪ್ರತಿ ಮನೆಯ ಯಜಮಾನಿಗೆ ಮಾಸಿಕ 2 ಸಾವಿರ ರೂ ನೀಡುತ್ತಿದೆ. `ತಮಗೂ ಈ ಯೋಜನೆ ಅಡಿ ನೆರವು ನೀಡಬೇಕು’ ಎಂದು ಲಿಂಗತ್ವ ಅಲ್ಪ ಸಂಖ್ಯಾತರು ಆಗ್ರಹಿಸಿದ್ದರು. ಸರ್ಕಾರ ಅವರ ಮನವಿ ಆಲಿಸಿ ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಅಧಿಕಾರಿಗಳು ತೃತೀಯ ಲಿಂಗಿಗಳ ಹುಡುಕಾಟ ನಡೆಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 8 ಜನ ಸಿಕ್ಕಿದ್ದು, ಅವರ ಪೈಕಿ 7 ಜನರಿಗೆ 2 ಸಾವಿರ ರೂ ಹಣ ಜಮಾ ಆಗುತ್ತಿದೆ. ಒಬ್ಬರಿಗೆ ಬ್ಯಾಂಕ್ ಸಮಸ್ಯೆಯಿಂದ ಹಣ ಪಾವತಿ ಆಗಿಲ್ಲ.
`ಭಿಕ್ಷಾಟನೆಯಿಂದ ದೂರ ಉಳಿದು ಸ್ವಂತ ಉದ್ದಿಮೆ ಮಾಡುವ ಮನಸ್ಸಿದೆ. ಈ ಹಣ ತನಗೆ ಅನುಕೂಲವಾಗಿದೆ’ ಎಂದು ಲಿಂಗತ್ವ ಅಲ್ಪ ಸಂಖ್ಯಾತೆ ಆಯಿಷಾ ಹೇಳಿದರು. `ಉತ್ತರ ಕನ್ನಡ ಜಿಲ್ಲೆಯಲ್ಲಿ 30-40 ಜನ ಲಿಂಗತ್ವ ಅಲ್ಪ ಸಂಖ್ಯಾತರಿದ್ದಾರೆ. ಅವರ ಸಮೀಕ್ಷೆ ನಡೆಯಬೇಕು’ ಎಂದವರು ಹೇಳಿದರು.
`ಮುಂಡಗೋಡದಲ್ಲಿ ಭಿಕ್ಷೆ ಬೇಡಲು ಬಂದ ಲಿಂಗತ್ವ ಅಲ್ಪ ಸಂಖ್ಯಾತರು ಸಾರ್ವಜನಿಕರಿಗೆ ತೊಂದರೆ ಮಾಡಿದ್ದು ಸರಿಯಲ್ಲ. ಎಲ್ಲರನ್ನು ಅವರ ಹಾಗೇ ಕೆಟ್ಟ ಭಾವನೆಯಿಂದ ನೋಡಬೇಡಿ’ ಎಂದು ಮನವಿ ಮಾಡಿದರು. `ಲಿಂಗತ್ವ ಅಲ್ಪ ಸಂಖ್ಯಾತರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ತಮ್ಮ ಮಾಹಿತಿ ಮತ್ತು ಅಗತ್ಯ ದಾಖಲೆ ಒದಗಿಸಿ ಗೃಹಲಕ್ಷ್ಮೀ ಕಾಸು ಪಡೆಯಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿರೂಪಾಕ್ಷ ಗೌಡ ಪಾಟೀಲ್ ತಿಳಿಸಿದ್ದಾರೆ.




