ಅಂಕೋಲಾ: ಬಾಸಗೋಡ-ಬೆಳಂಬಾರ ರಸ್ತೆ ಅಂಚಿನಲ್ಲಿ ನಿಂತು ಮಟ್ಕಾ ಆಡಿಸುತ್ತಿದ್ದ ದಿವಾಕರ ಗೌಡ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾನೆ. ವಿಚಾರಣೆ ವೇಳೆ ಮಟ್ಕಾ ಹಣವನ್ನುಓಸಿ ಬುಕ್ಕಿಯಾದ ಲಕ್ಷಣ ಗಾಂವ್ಕರ ಎಂಬಾತರಿಗೆ ನೀಡುವುದಾಗಿಯೂ ಆತ ಬಾಯ್ಬಿಟ್ಟಿದ್ದಾನೆ. ಈ ಹಿನ್ನಲೆ ಪೊಲೀಸರು ಈ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಡಿ 25ರಂದು ಬೆಳಂಬಾರ್ ಗ್ರಾಮದ ಧನಿಷ್ಠ ಕಿರಾಣಿ ಅಂಗಡಿ ಬಳಿ ಮೂಲೆಮನೆಯ ದಿವಾಕರ ಗೌಡ ಮಟ್ಕಾ ಆಡಿಸುವಾಗ ಸಿಕ್ಕಿ ಬಿದ್ದಿದ್ದ. ಆತ ಜನರಿಂದ ಸಂಗ್ರಹಿಸಿದ್ದ 600ರೂ ಹಣದ ಜೊತೆ ಮಟ್ಕಾ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ನಂತರ ಆತನನ್ನು ವಿಚಾರಣೆಗೆ ಒಳಪಡಿಸಿದಾಗ `ಜನರಿಂದ ಸಂಗ್ರಹಿಸಿದ ಹಣವನ್ನು ತೆಂಗಣಕೇರಿಯ ಲಕ್ಷಣ ಗಾಂವ್ಕರ’ಗೆ ಕೊಡುವೆ. ಇದರಲ್ಲಿ ನಂದೇನೂ ಇಲ್ಲ’ ಎಂದು ಹೇಳಿದ್ದ. ಈ ಹಿನ್ನಲೆ ಪೊಲೀಸ್ ಉಪನಿರೀಕ್ಷಕ ಸುನೀಲ ಹುಲ್ಲೊಳ್ಳಿ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿ, ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದರು.




