ಕಾರವಾರ: 2020-21ರ ಅವಧಿಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ನಡೆದ 179 ಕಾಮಗಾರಿಗಳ ಮೊತ್ತ ಗುತ್ತಿಗೆದಾರರಿಗೆ ಈವರೆಗೂ ಪಾವತಿಯಾಗಿಲ್ಲ. ಈ ಕಾಮಗಾರಿ ಕಳಪೆಯಾಗಿದೆ ಎಂದು ಆ ವೇಳೆ ಮಾಜಿಯಾಗಿದ್ದ ಶಾಸಕ ಸತೀಶ್ ಸೈಲ್ ಹಣ ಪಾವತಿಗೆ ಅಡ್ಡಿ ಮಾಡಿದ್ದು, `ಕಾಮಗಾರಿಯಲ್ಲಿ ಯಾವುದೇ ನ್ಯೂನ್ಯತೆಗಳಿಲ್ಲ’ ಎಂದು ಲೋಕಾಯುಕ್ತ ತನಿಖೆಯಲ್ಲಿ ಸಾಭೀತಾಗಿದೆ. ಅದಾಗಿಯೂ `ಲೋಕಾಯುಕ್ತ ತನಿಖೆಯ ಆದೇಶ ಪ್ರತಿ ಸಿಕ್ಕಿಲ್ಲ’ ಎಂಬ ಕಾರಣಕ್ಕೆ ನಗರಸಭೆ ಅಧಿಕಾರಿಗಳು ಗುತ್ತಿಗೆದಾರರನ್ನು ನಿತ್ಯ ಅಲೆದಾಡಿಸುತ್ತಿದ್ದಾರೆ.
`ಕಾರವಾರ ನಗರಸಭೆಯಿಂದ 10 ಕೋಟಿ ರೂ ಗುತ್ತಿಗೆದಾರರಿಗೆ ಪಾವತಿಯಾಗಬೇಕಿದೆ. ಈ ಹಣವನ್ನು ಪಾವತಿಸಲು ಅನುಕೂಲವಾಗುವಂತೆ ಲೋಕಾಯುಕ್ತ ಪ್ರಕರಣದ ತನಿಖಾ ವರದಿಯನ್ನು ನಗರಸಭೆಗೆ ಹಸ್ತಾಂತರಿಸಬೇಕು’ ಎಂದು ಗುತ್ತಿಗೆದಾರರು ಮಂಗಳವಾರ ಲೋಕಾಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. `ಸಾಲ ಮಾಡಿ ಗುತ್ತಿಗೆದಾರರು ಕಾಮಗಾರಿ ಮುಗಿಸಿದ್ದಾರೆ. ಎರಡು ವರ್ಷದಿಂದ ಹಣ ಪಾವತಿಯಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲೋಕಾಯುಕ್ತ ಪ್ರಕರಣ ಎದುರಿಸಿ ಅಂತಿಮ ಆದೇಶ ಹೊರ ಬಂದರೂ ಹಣ ಪಾವತಿಗೆ ಸಮಸ್ಯೆ ಮಾಡುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡರು.
`ನಮ್ಮ ಹಣ ನಮಗೆ ಕೊಡಿ’ ಎಂದು ಕೇಳಿದರೆ ನಗರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಲೋಕಾಯುಕ್ತ ತನಿಖೆ ಮುಗಿದ ಬಗ್ಗೆ ಅವರಿಗೆ ಅರಿವಿಲ್ಲ. ಹೀಗಾಗಿ ಅಂತಿಮ ಆದೇಶವನ್ನು ನಗರಸಭೆಯವರಿಗೆ ನೀಡಿ, ಗುತ್ತಿಗೆದಾರರ ಹಣ ಪಾವತಿಗೆ ಸೂಚಿಸಬೇಕು’ ಎಂದು ಕಾರವಾರ ತಾಲೂಕಾ ನೊಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದವರು ಆಗ್ರಹಿಸಿದರು.




