ಯಲ್ಲಾಪುರ: ಶಿರಸಿ ಸಹಾಯಕ ಆಯುಕ್ತೆ ಕಾವ್ಯರಾಣಿ ಅವರು ಗುರುವಾರ ಡಿಢೀರ್ ಆಗಿ ಬಾಸಲ್ ಶಾಲೆಗೆ ಭೇಟಿ ನೀಡಿದರು. ಮಧ್ಯಾಹ್ನದ ವೇಳೆ ಅವರು ಅಲ್ಲಿಯೇ ಬಿಸಿಯೂಟ ಸವಿದರು.
ಗುರುವಾರ ಬೆಳಗ್ಗೆ ಯಲ್ಲಾಪುರಕ್ಕೆ ಬಂದಿದ್ದ ಅವರು ತಹಶೀಲ್ದಾರ್ ಯಲ್ಲಪ್ಪ ಗೋಣಣ್ಣನವರ್ ಹಾಗೂ ಕಂದಾಯ ನಿರೀಕ್ಷಕಿ ಜ್ಯೋತಿ ನಾಯ್ಕ ಅವರ ಜೊತೆ ಕಳಚೆಗೆ ಹೋಗಿದ್ದರು. ಅಲ್ಲಿ ಮಾಲ್ಕಿ ಪ್ರದೇಶದಲ್ಲಿರುವ ಮರ ಕಟಾವು ಸ್ಥಳ ಪರಿಶೀಲನೆ ನಡೆಸಿ ಮರಳುವಾಗ ಬಾಸಲ್ ಗ್ರಾಮದ ಶಾಲೆ ನೋಡಿದರು. ತಮ್ಮ ವಾಹನವನ್ನು ನೇರವಾಗಿ ಶಾಲೆಯ ಕಡೆ ತಿರುಗಿಸುವಂತೆ ಅವರು ಚಾಲಕರಿಗೆ ಸೂಚಿಸಿದರು.
ಬಾಸಲ್ ಶಾಲೆ ಪ್ರವೇಶಿಸಿದ ನಂತರ ಅಲ್ಲಿನ ಮಕ್ಕಳ ಜೊತೆ ಮಾತನಾಡಿದರು. `ಎಲ್ಲರಿಗೂ ಸರಿಯಾಗಿ ಮೊಟ್ಟೆ ಸಿಗುತ್ತಿದೆಯೇ? ಚಿಕ್ಕಿ ಸರಿಯಾಗಿ ಕೊಡುತ್ತಿದ್ದಾರೆಯೇ?’ ಎಂದು ಪ್ರಶ್ನಿಸಿದರು. ಇದಕ್ಕೆ ಮಕ್ಕಳು `ಹೌದು’ ಎಂದು ತಲೆ ಅಲ್ಲಾಡಿಸಿದರು. ಶಾಲೆ ಆವರಣವನ್ನು ಸ್ವಚ್ಛವಾಗಿರಿಸಿಕೊಂಡಿರುವುದಕ್ಕೆ ಕಾವ್ಯರಾಣಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ರಿಜಿಸ್ಟರ್ ಪುಸ್ತಕದಲ್ಲಿ ರುಜಿ ಹಾಕಿ, ಮಕ್ಕಳ ಜೊತೆ ಬಿಸಿಯೂಟ ಮಾಡಿದರು.
`ಮಕ್ಕಳ ಕಲಿಕೆಗೆ ಯಾವುದೇ ತೊಂದರೆ ಆಗದಂತೆ ಮುತುವರ್ಜಿವಹಿಸಿ’ ಎಂದು ಅಲ್ಲಿನ ಶಿಕ್ಷಕರಿಗೆ ಸೂಚಿಸಿದರು. `ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು’ ಎಂದು ಅಡುಗೆ ಸಿಬ್ಬಂದಿಗೆ ಕಿವಿಮಾತು ಹೇಳಿದರು. ಈ ಶಾಲೆಯಲ್ಲಿ 44 ಮಕ್ಕಳು ಕಲಿಯುತ್ತಿದ್ದಾರೆ.




