ಹಳಿಯಾಳ: ಕಬ್ಬು ಕಟಾವು ನಡೆಸಿ ಸಕ್ಕರೆ ಕಾರ್ಖಾನೆಗೆ ಒಯ್ಯುತ್ತಿದ್ದ ಚಕ್ಕಡಿ ಗಾಡಿಗೆ ಹಿಂದಿನಿoದ ಕೆಎಸ್ಆರ್ಟಿಸಿ ಬಸ್ಸು ಡಿಕ್ಕಿಯಾಗಿದೆ. ಚಕ್ಕಡಿ ಗಾಡಿ ಜೊತೆ ಸಂಚರಿಸುತ್ತಿದ್ದ ಅಶ್ಪಾಕ್ ಲತೀಫನವರ್’ಗೆ ಸಹ ಗಾಯವಾಗಿದ್ದು, ಇದರಿಂದ ರೊಚ್ಚಿಗೆದ್ದ ಚಕ್ಕಡಿ ಗಾಡಿ ಜೊತೆಯಿದ್ದವರು ಕೆಎಸ್ಆರ್ಟಿಸಿ ಚಾಲಕನನ್ನು ಬಸ್ಸಿನಿಂದ ಇಳಿಸಿ ಥಳಿಸಿದ್ದಾರೆ. ಈ ವೇಳೆ ಬಸ್ಸು ಚಾಲಕ ಪುಂಡಲಿಕ ಪೂಜಾರಿ ಕತ್ತಿನಲ್ಲಿದ್ದ 25 ಗ್ರಾಂ ಚಿನ್ನದ ಸರ ಕಾಣೆಯಾಗಿದೆ!
ಜನವರಿ 8ರಂದು ಕೆಎಸ್ಆರ್ಟಿಸಿ ಬಸ್ ಡ್ರೆöÊವರ್ ಪುಂಡಲಿಕ ಪೂಜಾರಿ ಉಳುವಿಯಿಂದ ಹಳಿಯಾಳಕ್ಕೆ ಪ್ರಯಾಣಿಕರನ್ನು ಕರೆತರುತ್ತಿದ್ದಾಗ ಬಸ್ಸಿನಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದರು. ಹಳಿಯಾಳ ಯಲ್ಲಾಪುರ ರಸ್ತೆಯ ಸೋನಾಲಿಕ ಟಾಕ್ಟರ್ ಶೋ ರೂಂ ಪಕ್ಕ ಮೂರು ಚಕ್ಕಡಿ ಗಾಡಿಗಳು ಸಂಚರಿಸುತ್ತಿದ್ದವು. ಈ ವೇಳೆ ಚಕ್ಕಡಿ ಗಾಡಿಯವರು ಹಾಗೂ ಬಸ್ಸಿನ ಚಾಲಕನ ನಡುವೆ ಗಲಾಟೆ ನಡೆದಿದೆ. ಅದು ಹೊಡೆದಾಡದ ಸ್ವರೂಪಕ್ಕೆ ತಿರುಗಿದೆ.
`ದಾರಿ ಬಿಡುವಂತೆ ಕೋರಿ ಬಸ್ಸಿನ ಹಾರ್ನ ಹಾಕಿದ ಕಾರಣ ಒಂದಷ್ಟು ಜನ ಬಂದು ಥಳಿಸಿದರು’ ಎಂಬುದು ಪುಂಡಲಿಕ ಪೂಜಾರಿ ಅವರ ಆರೋಪ. `ಚಕ್ಕಡಿ ಗಾಡಿ ಹಿಂದೆ ಇದ್ದ ಜನ ಬಸ್ ಅಡ್ಡಹಾಕಿ ಹಿಂದಿನ ಬಾಗಿಲಿನಿಂದ ಬಸ್ಸಿನ ಒಳಗೆ ಬಂದು ತಲೆ, ಕೆನೆಗೆ ಹೊಡೆದಿದ್ದಾರೆ. ಬಸ್ಸನ್ನು ಮುಂದೆ ಚಲಾಯಿಸಲು ಬಿಡದೇ ತನ್ನನ್ನು ಕೆಳಗಿಳಿಸಿ ಥಳಿಸಿದ್ದಾರೆ’ ಎಂದು ಚಾಲಕ ಪುಂಡಲಿಕ ಪೂಜಾರಿ ದೂರಿದ್ದಾರೆ. `ಈ ವೇಳೆ ಒಬ್ಬರು ಅಂಗಿ ಹಿಡಿದು ಎಳೆದಿದ್ದು, ಕತ್ತಿನಲ್ಲಿದ್ದ ಚಿನ್ನದ ಸರವೂ ಕಾಣೆಯಾಗಿದೆ’ ಎಂದವರು ಹೇಳಿದ್ದಾರೆ.
ಇನ್ನೂ `ಚಕ್ಕಡಿ ಗಾಡಿ ಮೂಲಕ ಕಬ್ಬು ತೆಗೆದುಕೊಂಡು ಹೋಗುತ್ತಿದ್ದಾಗ ತನಗೆ ಬಸ್ಸು ಡಿಕ್ಕಿಯಾಗಿದೆ’ ಎಂದು ಹಳಿಯಾಳ ಖಾಜಿಗಲ್ಲಿ ಅಶ್ಪಾಕ್ ಲತೀಫನವರ್ ದೂರಿದ್ದಾರೆ. ಹಸಿರು ಬಣ್ಣದ ಬಸ್ಸಿನ ಚಾಲಕ ತನಗೆ ಬಸ್ಸು ಗುದ್ದಿ ಕಾಲು, ತೋಳು, ಬೆನ್ನಿಗೆ ಪೆಟ್ಟು ಮಾಡಿದ್ದಾನೆ’ ಎಂದು ಅವರು ಹೇಳಿದ್ದಾರೆ. ಎರಡು ಕಡೆಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ.




