ಕಾರವಾರ: `ಬ್ಯಾಂಕಿoಗ್ ವ್ಯವಸ್ಥೆಯಲ್ಲಿ ನಂಬಿಕೆ, ನಿಯತ್ತು ಮತ್ತು ವಿಶ್ವಾಸ ಅತಿಮುಖ್ಯ’ ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಬ್ಯಾಂಕಿoಗ್ ಒಂಬುಡ್ಸಮನ್ ಬಾಲು ಕೆಂಚಪ್ಪ ಹೇಳಿದ್ದಾರೆ.
ಶನಿವಾರ ಸಾಗರ ದರ್ಶನ ಭವನದಲ್ಲಿ ಎಸ್ಬಿಐ ಹಾಗೂ ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆದ ಬ್ಯಾಂಕಿoಗ್ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. `ಬ್ಯಾಂಕಿoಗ್ ವ್ಯವಸ್ಥೆಯಲ್ಲಿ ವಿಶ್ವಾಸ ನಂಬಿಕೆ ಹಾಗೂ ಗ್ರಾಹಕರನ್ನು ಸೆಳೆಯುವ ಶಕ್ತಿ ಇದೆ. ಗ್ರಾಹಕರ ರಕ್ಷಣೆ ಹಾಗೂ ಅವರಿಗೆ ತಿಳುವಳಿಕೆ ನೀಡುವುದು ಒಂಬಡ್ಸ್ಮನ್’ನ ಜವಾಬ್ದಾರಿ. ಆರ್ಬಿಐ ವ್ಯಾಪ್ತಿಯೊಳಗೆ ಬರುವ ಸಂಸ್ಥೆಗಳಲ್ಲಿ ಗ್ರಾಹಕರಿಗೆ ನೀಡುವ ಸೇವೆಗಳಲ್ಲಿ ತೊಂದರೆ ಕಂಡು ಬಂದಾಗ ಕೋರ್ಟ್’ಗೆ ಹೋಗುವ ಬದಲು ಆರ್ಬಿಐನ ಒಂಬಡ್ಸ್ಮನ್’ಗೆ ದೂರು ನೀಡಿದ್ದಲ್ಲಿ ಶುಲ್ಕರಹಿತವಾಗಿ ಸಮಸ್ಯೆ ಬಗೆಹರಿಸಲಾಗುತ್ತದೆ’ ಎಂದರು.
`ಗ್ರಾಹಕರು ನೀಡಿದ ದೂರಿಗೆ ಬ್ಯಾಂಕಿನವರು 30 ದಿನದೊಳಗೆ ಸ್ಪಂದಿಸಬೇಕು. ದೂರು ನೀಡುವ ವಿಧಾನದ ಬಗ್ಗೆ ವೆಬ್ಸೈಟಿನಲ್ಲಿ ಪ್ರಕಟಿಸಬೇಕು’ ಎಂದರು. `ಬ್ಯಾಂಕಿನ ಶಾಖೆಯಲ್ಲಿ ಸಹ ದೂರು ನೀಡುವ ವ್ಯವಸ್ಥೆಗಳಿದ್ದು, ಗ್ರಾಹಕರು ಇಲ್ಲಿ ದೂರು ಕೊಡಬಹುದು’ ಎಂದರು. `ಗ್ರಾಹಕರ ಪ್ರತಿಯೊಂದು ರೂಪಾಯಿಯೂ ವ್ಯತ್ಯಾಸವಾಗದಂತೆ ಸುರಕ್ಷಿತವಾಗಿ ಇಡುವುದು ಬ್ಯಾಂಕ್ ಅಧಿಕಾರಿಗಳ ಹೊಣೆ’ ಎಂದರು.





