ಮುಂಡಗೋಡ: ಶನಿವಾರ ನಸುಕಿನಲ್ಲಿ ದುಷ್ಕರ್ಮಿಗಳ ದಾಳಿಗೆ ಒಳಗಾಗಿ ಮೈ-ಕೈ ಪೆಟ್ಟು ಮಾಡಿಕೊಂಡಿರುವ ಪಿಎಸ್ಐ ಪರಶುರಾಮ ಮಿರ್ಚಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಚಿಕಿತ್ಸೆ ಪಡೆದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮೈ-ಕೈ ನೋವು ಮಾಡಿಕೊಂಡಿದ್ದರೂ ಅದನ್ನು ಮರೆತು ಅವರು ಈ ದಿನ ಕೆಲಸಕ್ಕೆ ಹಾಜರಾಗಿದ್ದಾರೆ.
ಯಲ್ಲಾಪುರದ ಹಳಿಯಾಳ ರಸ್ತೆಯ ಡೌಗಿನಾಳದ ಬಳಿ ಶನಿವಾರ ಬೆಳಗ್ಗೆ 4.30ರ ಆಸುಪಾಸಿಗೆ ಪೊಲೀಸರ ಮೇಲೆ ದಾಳಿ ನಡೆಸಿದರು. ಈ ದಾಳಿಯಲ್ಲಿ ದುಷ್ಕರ್ಮಿಗಳನ್ನು ಎದುರು ಹಾಕಿಕೊಂಡ ಮುಂಡಗೋಡಿನ ಸಿಪಿಐ ರಂಗನಾಥ ನೀಲಮ್ಮನವರ ಹಾಗೂ ಪಿಎಸ್ಐ ಪರಶುರಾಮ ಮಿರ್ಜಗಿ ಸಹ ಗಾಯಗೊಂಡರು. ಗಾಯಗೊಂಡ ಪೊಲೀಸ್ ಅಧಿಕಾರಿಗಳನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.
ಇನ್ನೂ ಅಪಹರಣ ಪ್ರಕರಣ ಪತ್ತೆಗಾಗಿ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ನಾಲ್ಕು ತಂಡ ರಚಿಸಿದ್ದು, ಆ ಪೈಕಿ ಪರಶುರಾಮ ಮಿರ್ಜಗಿ ಅವರು ಒಂದು ತಂಡವನ್ನು ಮುನ್ನಡೆಸುತ್ತಿದ್ದರು. ನಿರಂತರ ತಿರುಗಾಟ, ನಿದ್ರೆಯಿಲ್ಲದ ರಾತ್ರಿ ಜೊತೆಗೆ ದುಷ್ಕರ್ಮಿಗಳ ದಾಳಿಯಿಂದ ತತ್ತರಿಸಿದ್ದರು. ನಸುಕಿನಲ್ಲಿ ನಡೆದ ಆಕ್ರಮಣದಿಂದ ಪರಶುರಾಮ ಮಿರ್ಜಗಿ ಅವರ ಮೊಣಕಾಲಿಗೆ ದೊಡ್ಡ ಪೆಟ್ಟಾಗಿದೆ. ಕೈಗೆ ಗಾಯವಾಗಿದೆ. ಸೊಂಟಕ್ಕೆ ನೋವಾಗಿದೆ. ಈ ಹಿನ್ನಲೆ ವೈದ್ಯರು ಅವರಿಗೆ ಬ್ಯಾಂಡೇಜ್ ಸುತ್ತಿ ವಿಶ್ರಾಂತಿಗೆ ಸೂಚಿಸಿದ್ದರು.
ಆದರೆ, ಘಟನಾವಳಿಗಳ ಕುರಿತು ಪ್ರಮುಖ ಸಾಕ್ಷಿಯೂ ಅವರಾಗಿದ್ದ ಕಾರಣ ವಿಶ್ರಾಂತಿಯ ಮನಸ್ಸು ಮಾಡಲಿಲ್ಲ. ವೈದ್ಯರು ಇಂಜೆಕ್ಷನ್ ನೀಡಿ, ಔಷಧಿ ವಿತರಿಸಿದ ನಂತರ ಅದನ್ನು ಪಡೆದು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರ ಮುಂದೆ ಹಾಜರಾದರು. ಕೈ’ಗೆ ಬ್ಯಾಂಡೇಜ್ ಸುತ್ತಿದ ನೋವಿನಲ್ಲಿದ್ದರೂ ತಮಗೆವಹಿಸಿದ ಜವಾಬ್ದಾರಿ ನಿಭಾಯಿಸಲು ಕೆಲಸಕ್ಕೆ ಹಾಜರಾದರು. `ಕರ್ತವ್ಯ ಮುಗಿಸಿ ಇದೀಗ ಮನೆಗೆ ಮರಳಿದ್ದೇನೆ. ಕಾನೂನಾತ್ಮಕ ಪ್ರಕ್ರಿಯೆಗಳ ಒಂದು ಹಂತದ ಕೆಲಸ ಮುಗಿಸಿ ಇದೀಗ ವಿಶ್ರಾಂತಿ ಪಡೆಯುತ್ತಿದ್ದೇನೆ’ ಎಂದು ಅವರು ವಿವರಿಸಿದರು.





