ಕಾರವಾರ: ‘ಬಿಣಗಾದಲ್ಲಿರುವ ಆದಿತ್ಯಾ ಬಿರ್ಲಾ ಗ್ರೂಪಿನ ಗ್ರಾಸೀಂ ಇಂಡಸ್ಟ್ರೀಸ್’ನಲ್ಲಿ ಕಾರ್ಮಿಕರಿಗೆ ಸುರಕ್ಷತೆ ಇಲ್ಲ. ಕಾರ್ಮಿಕರ ಹಿತ ಕಾಪಾಡಲು ಕಂಪನಿ ವಿಫಲವಾಗಿದೆ’ ಎಂದು ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ದಿಲೀಪ್ ಅರ್ಗೇಕರ್ ಕಿಡಿಕಾರಿದ್ದಾರೆ.
‘ಬಿಣಗಾದ ಬಿಲ್ಟ್ ಕಂಪನಿಯಲ್ಲಿ ನೂರಾರು ಕಾರ್ಮಿಕರು ಕೆಲಸವನ್ನ ಮಾಡುತ್ತಿದ್ದಾರೆ. ಆದರೆ, ಇಂಥ ದೊಡ್ಡ ಕಂಪನಿಯಲ್ಲಿ ಮುಂಜಾಗೃತಾ ಕ್ರಮ ಅನುಸರಿಸದ ಪರಿಣಾಮ ಪದೇ ಪದೇ ಅವಘಡ ನಡೆಯುತ್ತಿದೆ. ಶನಿವಾರ ಮತ್ತೆ ರಾಸಾಯನಿಕ ಸೋರಿಕೆ ಆಗಿರುವುದು ದುರಂತ’ ಎಂದವರು ಕಳವಳವ್ಯಕ್ತಪಡಿಸಿದ್ದಾರೆ.
‘ಕೆಲ ದಿನದ ಹಿಂದೆ ಕಾರವಾರ ಯುವಕನೊಬ್ಬ ಕಂಪನಿಯಲ್ಲಿ ನಡೆದಿದ್ದ ಕ್ಲೋರಿನ್ ಸೋರಿಕೆಯಿಂದ ಸಾವನಪ್ಪಿದ್ದ. ಅದಾದ ನಂತರವಾದರೂ ಕಂಪನಿ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾರ್ಮಿಕರ ಸುರಕ್ಷತೆ ಬಗ್ಗೆ ಗಮನಹರಿಸಬೇಕಿತ್ತು. ಆದರೆ, ಶನಿವಾರ ಮತ್ತೆ ವಿಷ ಅನಿಲ ಸೋರಿಕೆ ಆಗಿರುವುದು ಕಂಪನಿ ಅಧಿಕಾರಿಗಳ ನಿರ್ಲಕ್ಷ್ಯ ತೋರಿಸುತ್ತಿದೆ’ ಎಂದವರು ಹೇಳಿದ್ದಾರೆ.
ಶನಿವಾರ ಮತ್ತೆ ಕ್ಲೋರಿನ್ ಸೋರಿಕೆಯಿಂದ ಹದಿನೆಂಟು ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ. ಮತ್ತೆ ದೊಡ್ಡ ಮಟ್ಟದಲ್ಲಿ ಸೋರಿಕೆಯಾದರೆ ಪ್ರಾಣಾಪಾಯದ ಆತಂಕವಿದ್ದು, ಕಾರ್ಮಿಕರ ಸುರಕ್ಷತೆ ಕೈಗೊಳ್ಳದ ಕಂಪನಿ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು.ಗಿದೆ. ಯಾವುದೇ ಕ್ರಮ ಆಗದೇ ಇದ್ದರೆ ಜಯಕರ್ನಾಟಕ ಜನಪರ ವೇದಿಕೆ ಹೋರಾಟ ನಡೆಸಲಿದೆ’ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ದಿಲೀಪ್ ಜಿ ಅರ್ಗೇಕರ್. ಜಿಲ್ಲಾ ಕಾರ್ಯಾಧ್ಯಕ್ಷ ರೋಷನ್ ಹರಿಕಂತ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುದೇಶ್ ನಾಯ್ಕ್. ಕಾರವಾರ ತಾಲೂಕ ಅಧ್ಯಕ್ಷ ಮೋಹನ್ ಉಳ್ಳೇಕರ್ ಎಚ್ಚರಿಸಿದ್ದಾರೆ.





