ಹೊನ್ನಾವರ: ಭಿಕ್ಷೆ ಬೇಡಿ ಬದುಕು ಕಂಡಿಕೊoಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ಕುಂಠಿಮಾಸ್ತಿ ದೇಗುಲದ ಎದುರು ಶವವಾಗಿದ್ದಾನೆ.
60 ವರ್ಷದ ವ್ಯಕ್ತಿಯೊಬ್ಬನ ಎರಡು ಕಾಲುಗಳಿಗೆ ಗಾಯವಾಗಿದ್ದು, ಅದಕ್ಕೆ ಆತ ಚಿಕಿತ್ಸೆ ಪಡೆದಿರಲಿಲ್ಲ. ಬದಲಾಗಿ ಕಾಲಿಗೆ ಗಾಯವಾಗಿರುವುದನ್ನು ನೆಪವಾಗಿರಿಸಿಕೊಂಡು ಆತ ಭಿಕ್ಷೆ ಬೇಡುತ್ತಿದ್ದ. ಹೊನ್ನಾವರದ ಕರ್ಕಿನಾಡ, ಗೌಡರಕೇರಿ ಸೇರಿ ವಿವಿಧ ಪ್ರದೇಶದಲ್ಲಿ ಆತ ಸಂಚರಿಸುತ್ತಿದ್ದ. ಆತನನ್ನು ನೋಡಿದ ಕೆಲವರು ಭಿಕ್ಷೆ ಹಾಕುತ್ತಿದ್ದರು. ಕೆಲವರು ಬುದ್ದಿ ಹೇಳಿ ಕಳುಹಿಸುತ್ತಿದ್ದರು.
ಜನವರಿ 1ರಂದು ಆತ ಕರ್ಕಿನಾಡದ ಗೌಡರಕೇರಿ ಕ್ರಾಸಿನ ಬಳಿಯಿರುವ ಕುಂಠಿಮಾಸ್ತಿ ಮಂದಿರದ ಮುಂದೆ ಆಶ್ರಯ ಪಡೆದಿದ್ದ. ಅಲ್ಲಿಯೇ ಆತ ಕೊನೆ ಉಸಿರೆಳೆದಿದ್ದು, ನಿವೃತ್ತ ಕಂದಾಯ ನಿರೀಕ್ಷಕ ಪ್ರಭಾಕರ ಮಾಸ್ತಿಕಟ್ಟೆ ಈ ಬಗ್ಗೆ ಪೊಲೀಸ್ ಪ್ರಕರಣ ದಾಖಲಿಸಿದರು.





