ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಅಳಿಯ ಚಂದ್ರ ಆರ್ಯ ಕೆನಡಾ ಪ್ರಧಾನಿ ಆಗುವ ಸಾಧ್ಯತೆ ಹೆಚ್ಚಿದೆ. `ತಾನು ಪ್ರಧಾನಿ ಆಕಾಂಕ್ಷಿ’ ಎಂದು ಚಂದ್ರ ಆರ್ಯ ಹೇಳಿಕೊಂಡಿದ್ದಾರೆ.
ಚoದ್ರ ಆರ್ಯ ಅವರು ತುಮಕೂರು ಜಿಲ್ಲೆಯವರು. ಅಲ್ಲಿನ ದ್ವಾರಲು ಗ್ರಾಮದಲ್ಲಿ ಜನಿಸಿದ ಅವರು ಧಾರವಾಡ ವಿಶ್ವವಿದ್ಯಾಲಯದಲ್ಲಿ ಎಂ ಬಿ ಎ ಕಲಿತರು. 2006ರಲ್ಲಿ ಅವರು ಕೆನಡಾಗೆ ತೆರಳಿದರು. ಇಂಡೋ-ಕೆನಡಾ ಒಟ್ಟಾವಾ ಬ್ಯುಸಿನೆಸ್’ನ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದಾರೆ. 2015ರಲ್ಲಿ ಫೆಡರಲ್ ಚುನಾವಣೆಗೆ ಸ್ಪರ್ಧಿಸಿದ ಅವರು ನೇಪಿಯನ್ ರೈಡಿಂಗ್ ಸಂಸದರಾದರು. ಅವರ ಕೆಲಸ ಮೆಚ್ಚಿದ ಜನ 2019 ಹಾಗೂ 2021ರಲ್ಲಿ ಸಂಸದರಾಗಿ ಮರು ಆಯ್ಕೆ ಮಾಡಿದರು.
ಕೆನಡಾದ ರಾಜಕಾರಣದಲ್ಲಿ ಚಂದ್ರ ಆರ್ಯ ಅತ್ಯಂತ ಚುರುಕಾಗಿದ್ದಾರೆ. 2022ರಲ್ಲಿ ಕೆನಡಾದಲ್ಲಿ ಕನ್ನಡ ಭಾಷೆಯಲ್ಲಿ ಅವರು ಭಾಷಣ ಮಾಡಿದ್ದರು. ಟೆರೆಂಟೋದಲ್ಲಿನ ಹಿಂದೂ ದೇವಾಲಯದ ಧ್ವಂಸ ಪ್ರಕರಣಗಳಲ್ಲಿಯೂ ಅವರು ಧ್ವನಿ ಎತ್ತಿದ್ದರು. ಚಂದ್ರ ಆರ್ಯ ಅವರ ಪತ್ನಿ ಸಂಗೀತ ಗಾಯತ್ರಿ ಅವರು ಗೋಕರ್ಣದ ಗೋಪಾಲ ಗಾಯತ್ರಿ ಅವರ ಪುತ್ರಿ. ಗೋಪಾಲ ಗಾಯತ್ರಿ ಅವರು ದಾಂಡೇಲಿಯಲ್ಲಿ ಉಪನ್ಯಾಸಕರಾಗಿದ್ದು, ಸಂಗೀತ ಗಾಯತ್ರಿ ಅವರು ಸಹ ಶಿಕ್ಷಕರಾಗಿ ಸೇವೆಯಲ್ಲಿದ್ದರು. ಸಂಗೀತ ಗಾಯತ್ರಿ ಅವರು ತಮ್ಮ ಬಾಲ್ಯವನ್ನು ಜಿಲ್ಲೆಯಲ್ಲಿ ಕಳೆದಿದ್ದಾರೆ. ವರ್ಷಕ್ಕೆ ಒಂದೆರಡು ಬಾರಿ ಅವರು ಈ ನೆಲ ಸ್ಪರ್ಶಿಸುತ್ತಾರೆ. ಪತಿ ಸಂಸದರಾಗಿದ್ದರೂ ಸಂಗೀತ ಅವರು ಕೆನಡಾದಲ್ಲಿ ಶಿಕ್ಷಕ ವೃತ್ತಿ ಬಿಟ್ಟಿಲ್ಲ.
ಇದೀಗ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ರಾಜೀನಾಮೆ ನಂತರ ಚಂದ್ರ ಆರ್ಯ ಅವರು ಪ್ರಧಾನಿ ಅಭ್ಯರ್ಥಿ ಆಕಾಂಕ್ಷಿಯಾಗಿದ್ದಾರೆ.




