ಯಲ್ಲಾಪುರ: ಅರಣ್ಯ ಅತಿಕ್ರಮಣದಾರರಿಗೆ 1930ಕ್ಕೂ ಹಿಂದಿನ ದಾಖಲೆ ನೀಡುವಂತೆ ಸತಾಯಿಸುತ್ತಿರುವ ಕ್ರಮವನ್ನು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಖಂಡಿಸಿದ್ದಾರೆ. ಕೋಳಿಕೇರಿ ಗ್ರಾಮದ ದೇಶಪಾಂಡೆ ನಗರದಲ್ಲಿ ಅತಿಕ್ರಮಣದಾರರ ಸಭೆ ನಡೆಸಿದ ಅವರು ಅಲ್ಲಿನ ಜನತೆಗೆ `ನಿಮ್ಮೊಂದಿಗೆ ನಾವಿದ್ದೇವೆ’ ಎಂಬ ಭರವಸೆ ನೀಡಿದ್ದಾರೆ.
`ಅರಣ್ಯ ಅತಿಕ್ರಮಣದಾರರಿಗೆ 1930ಕ್ಕಿಂತ ಹಿಂದಿನ ದಾಖಲೆ ಸಲ್ಲಿಸಿ ಎಂದು ಪದೇ ಪದೇ ಉಪವಿಭಾಗಾಧಿಕಾರಿ ಕಚೇರಿಯ ಪತ್ರ ಬರುತ್ತಿದೆ. ಆ ಅವಧಿಯಲ್ಲಿನ ದಾಖಲೆ ಕಾಪಾಡಿಕೊಳ್ಳಲು ಬಡವರಿಗೆ ಸಾಧ್ಯವಿಲ್ಲ ಎಂಬ ವಿಷಯ ಅರಿತು ಈ ರೀತಿ ನೋಟಿಸ್ ನೀಡಲಾಗುತ್ತಿದೆ. ಇದರೊಂದಿಗೆ ಪದೇ ಪದೇ ಪರಿಶೀಲನಾ ಸಭೆಗೆ ಅತಿಕ್ರಮಣದಾರರನ್ನು ಕರೆಯಿಸಿ, ಅಲೆದಾಟದ ಮೂಲಕ ಹಿಂಸಿಸಲಾಗುತ್ತಿದೆ. ಈ ರೀತಿ ವರ್ತಿಸುವುದು ಖಂಡನೀಯ’ ಎಂದು ಶಾಂತರಾಮ ನಾಯಕ ಹೇಳಿದ್ದಾರೆ.
`ಮೂರು ಸಲ ಕರೆದಾಗಲೂ ಸಭೆಗೆ ಹಾಜರಾಗಿ ದಾಖಲೆ ಒದಗಿಸದೇ ಇದ್ದವರ ಅತಿಕ್ರಮಣ ಖುಲ್ಲಾ ಪಡಿಸುವ ಬೆದರಿಕೆ ಒಡ್ಡಲಾಗುತ್ತಿದೆ. ಜನಪ್ರತಿನಿಧಿಗಳು ಇಲ್ಲದ ಸಮಿತಿ ಈ ನಿರ್ಣಯ ಕೈಗೊಳ್ಳುವುದು ನಿಯಮಬಾಹಿರ. ಜಿ ಪಂ ಹಾಗೂ ತಾ ಪಂ ಸದಸ್ಯರಿಲ್ಲದೇ ಸಮಿತಿ ನಿರ್ಧಾರ ಪ್ರಕಟಿಸುವುದನ್ನು ಬಿಡಬೇಕು’ ಎಂದವರು ಹೇಳಿದ್ದಾರೆ. `ಅರಣ್ಯವಾಸಿಗಳ ಪರ ನಿಲುವು ಪ್ರಕಟಿಸಲು ಈಗಿನ ರಾಜಕೀಯ ನಾಯಕರಲ್ಲಿ ಇಚ್ಚಾಶಕ್ತಿ ಕೊರತೆ ಕಾಣುತ್ತಿದೆ. ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಹಾಗೂ ಕಾಂಗ್ರೆಸ್ ಅತಿಕ್ರಮಣ ಮಂಜೂರಿ ಭರವಸೆ ನೀಡಿ, ನಂತರ ಆ ಆಶ್ವಾಸನೆಯನ್ನು ಮರೆತಿದೆ’ ಎಂದು ಸಭೆಯಲ್ಲಿ ದೂರಿದರು.
`ಜಿಲ್ಲೆಯ ಎಲ್ಲಾ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರು ಅತಿಕ್ರಮಣದಾರರ ವಿಷಯದಲ್ಲಿ ತಮ್ಮ ನಿಲುವು ಪ್ರಕಟಿಸಬೇಕು. ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಪ್ರಧಾನ ಕಾರ್ಯದರ್ಶಿಗಳ ಈ ಆದೇಶ ತಡೆಹಿಡಿಯಬೇಕು’ ಎಂದು ಶಾಂತರಾಮ ನಾಯಕ ಆಗ್ರಹಿಸಿದ್ದಾರೆ. `ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ಅಗತ್ಯವಿದ್ದು, ಮೂರು ತಲೆಮಾರು ಅಥವಾ 75 ವರ್ಷದ ಹಿಂದಿನ ದಾಖಲೆಯ ಮಾನದಂಡ ಹಿಂಪಡೆಯುವುದು ಅನಿವಾರ್ಯ’ ಎಂದವರು ಹೇಳಿದ್ದಾರೆ.
`ಅರಣ್ಯ ಭೂಮಿ ಹಕ್ಕು ದೊರಕಿಸಿಕೊಡಲು ಕೆಲವರು ಬಡವರ ದಾರಿ ತಪ್ಪಿಸುತ್ತಿದ್ದಾರೆ. ಅತಿಕ್ರಮಣದಾರರಿಂದ ಹಣ ಪಡೆಯುವ ಬಗ್ಗೆಯೂ ಆರೋಪಗಳಿವೆ. ಆಮೀಷಕ್ಕೆ ಬಲಿಯಾಗದೇ ಸಾಮೂಹಿಕ ಹೋರಾಟ ನಡೆಸಬೇಕು’ ಎಂದವರು ಕರೆ ನೀಡಿದರು. ಕಾನೂನು ತಿದ್ದುಪಡಿಗೆ ಆಗ್ರಹಿಸಿ ರೈತರಿಂದ ಪ್ರಧಾನಮಂತ್ರಿಗೆ ಪತ್ರ ಬರೆಯುವ ಅಭಿಯಾನ ನಡೆಸುವ ಬಗ್ಗೆ ತಿಳಿಸಿದರು. ಈ ಸಭೆಯಲ್ಲಿ ಊರಿನ ಪ್ರಮುಖರಾದ ವಾಗು ಲೂಕ್ಕು ಕೊಕ್ಕರೆ, ದಾಕು ಸೋನು ಕೊಕ್ಕರೆ, ಲಕ್ಕು ಸೋನು ಕೊಕ್ಕರೆ, ಜನ್ನಿ ಪಾಟ್ಕರೆ, ಗಂಗಾ ರಿಕ್ಕು ಕೊಕ್ಕರೆ, ಸಾವಿತ್ರಿ ದಾಕು ಕೊಕ್ಕರೆ, ಲಕ್ಷ್ಮೀ ಸಿದ್ದಿ, ಖಂಡು ಪಾಟ್ಕರೆ, ಮಾಲು ಕೊಕ್ಕರೆ, ದಿವ್ಯ ಮಾಲು ಕೊಕ್ಕರೆ, ಸೋನು ಶಾಂತಿ ಪಾಟ್ಕರೆ ಇತರರು ಇದ್ದರು.




