ಶಿರಸಿ: ಬಿಪಿ ಹಾಗೂ ಶುಗರ್ ಕಾರಣದಿಂದ ಬಳಲುತ್ತಿದ್ದ ಚೌಡಿ ಗೌಡ ಈ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಆದರೆ, ಅದು ಪ್ರಯೋಜನಕ್ಕೆ ಬಂದಿರಲಿಲ್ಲ. ಹೀಗಾಗಿ ಅವರು ಇದೀಗ ನೇಣು ಹಾಕಿಕೊಂಡು ಜೀವ ಬಿಟ್ಟಿದ್ದಾರೆ.
ಶಿರಸಿ ಜಾನ್ಮನೆ ಬಳಿಯ ಬಲವಳ್ಳಿ ಬಾಗಿಮನೆಯಲ್ಲಿ ಚೌಡಿ ಗೌಡ (55) ವಾಸವಾಗಿದ್ದರು. ಅವರ ಮಗ ಪ್ರಮೋದ ಗೌಡ ಕೃಷಿ ಕೆಲಸ ಮಾಡಿ ತಾಯಿಯನ್ನು ಸಾಕುತ್ತಿದ್ದರು. ಜೀವನದಲ್ಲಿ ನೊಂದಿದ್ದ ಚೌಡಿ ಗೌಡ ಅವರು ಸದಾ ಕಷ್ಟಗಳ ಬಗ್ಗೆ ಮಾತನಾಡುತ್ತಿದ್ದರು. ಆಗಾಗ ಕೂಲಿ ಕೆಲಸಕ್ಕೆ ಸಹ ಅವರು ಹೋಗುತ್ತಿದ್ದರು. ಈ ನಡುವೆ ಅಧಿಕ ರಕ್ತದೊತ್ತಡದಿಂದ ಅವರು ಬಳಲಿದ್ದು, ಇದನ್ನು ದೊಡ್ಡ ಸಮಸ್ಯೆ ಎಂದು ಭಾವಿಸಿ ಕೊರಗಿದ್ದರು.
ಅನಾರೋಗ್ಯದ ಕಾರಣದಿಂದ ಬೇಸರಿಸಿಕೊಂಡಿದ್ದ ಚೌಡಿ ಗೌಡ ಅವರು ಕೆಲ ದಿನದ ಹಿಂದೆ ವಿಷ ಕುಡಿದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದರಿಂದ ಅವರು ಬದುಕಿದರು. ಅದಾದ ನಂತರ ಹಂತ ಹಂತವಾಗಿ ಚೇತರಿಸಿಕೊಂಡಿದ್ದು, ಈಚೆಗೆ ಸಂಪೂರ್ಣವಾಗಿ ಬದಲಾಗಿದ್ದರು. ಜನವರಿ 12ರ ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದಾಗ ಅವರು ಕಾಡಿಗೆ ಹೋದವರು ಮರಳಿ ಬರಲಿಲ್ಲ.
ಮರುದಿನ ಬೆಳಗ್ಗೆ ಚೌಡಿ ಗೌಡ ಅವರನ್ನು ಹುಡುಕಾಡಿದಾಗ ಮನೆ ಅಂಚಿನ ಅರಣ್ಯ ಪ್ರದೇಶದಲ್ಲಿ ಅವರ ಶವ ಸಿಕ್ಕಿತು. ಮರದ ಕೊಂಬೆಗೆ ಸೀರೆಯಿಂದ ಬಿಗಿದುಕೊಂಡು ಅವರು ನೇಣು ಹಾಕಿಕೊಂಡಿದ್ದರು. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಮೋದ ಗೌಡ ಅವರು ಪ್ರಕರಣ ದಾಖಲಿಸಿ ಶವ ಪಡೆದರು.





