ರೋಗಿ ಹಾಗೂ ವೈದ್ಯರ ನಡುವಿನ ಅಂಕಿ-ಸoಖ್ಯೆಗಳ ಬಗ್ಗೆ ಅಧ್ಯಯನ ನಡೆಸಿದಾಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಭವಿಷ್ಯದಲ್ಲಿ ವೈದ್ಯರ ಕೊರತೆ ಹೆಚ್ಚಾಗುವ ಸಾಧ್ಯತೆಗಳಿವೆ. `ಮುಂಬರುವ ವರ್ಷಳಲ್ಲಿ ಉತ್ತರಕನ್ನಡದ ವೈದ್ಯರು ಲಭ್ಯವಿರುವುದಿಲ್ಲ’ ಎಂದು ಸ್ವತಃ ವೈದ್ಯರಾಗಿರುವ ಡಾ ರವಿಕಿರಣ ಪಟವರ್ಧನ ಅವರು ಅಭಿಪ್ರಾಯಪಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಈಗಲೇ ವೈದ್ಯರ ಕೊರತೆಯಿದೆ. ಬಹುತೇಕ ಆಸ್ಪತ್ರೆಗಳಲ್ಲಿ ಯಂತ್ರಗಳಿದ್ದರೂ ನುರಿತ ತಜ್ಞರಿಲ್ಲ. ಇದರೊಂದಿಗೆ ಉತ್ತರ ಕನ್ನಡ ಜಿಲ್ಲೆಯಿಂದ ವೈದ್ಯಕೀಯ ವೃತ್ತಿ ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆಯಲ್ಲಿಯೂ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹೀಗೆ ಮುಂದುವರೆದರೆ, ಬೇರೆ ಊರಿನ ವೈದ್ಯರು ಇಲ್ಲಿ ಬರುವುದಿಲ್ಲ. ಇಲ್ಲಿ ವೈದ್ಯಕೀಯ ವಿಷಯದಲ್ಲಿ ಆಸಕ್ತಿ ಹೊಂದಿದವರು ಇಲ್ಲ ಎಂಬ ಪರಿಸ್ಥಿತಿ ಎದುರಾಗುವ ಆತಂಕ ಎದುರಾಗಿದೆ.
ಈ ಹಿನ್ನಲೆ ಡಾ ರವಿಕಿರಣ ಪಟವರ್ಧನ ಅವರು `ಮುಂಬರುವ ದಿನಗಳಲ್ಲಿ ಉತ್ತರಕನ್ನಡದ ವೈದ್ಯರು ಲಭ್ಯವಿರುವುದಿಲ್ಲ ಎನ್ನುವುದು ಖಚಿತ’ ಎಂದಿದ್ದಾರೆ. `ಇತರೆ ಜಿಲ್ಲೆ, ರಾಜ್ಯಗಳ ವೈದ್ಯರು ಇಲ್ಲಿ ಬಂದರೂ ಬರಬಹುದು. ಆದರೆ, ಉತ್ತರ ಕನ್ನಡ ಜಿಲ್ಲೆಗೆ ಇಲ್ಲಿನ ಆಚಾರ-ವಿಚಾರ ಅರಿತ ಇದೇ ಜಿಲ್ಲೆಯ ವೈದ್ಯರು ಸೇವೆಗೆ ಸಿಗುವ ಸಾಧ್ಯತೆಗಳಿಲ್ಲ’ ಎಂಬುದು ಅವರ ಅಭಿಪ್ರಾಯ.
ಪ್ರಸ್ತುತ ಘಟ್ಟದ ಕೆಳಗಿನವರು, ಘಟ್ಟದ ಮೇಲಿನವರು ಹೈಟೆಕ್ ಆಸ್ಪತ್ರೆಯ ಬಗ್ಗೆ ಭಾರಿ, ಮುಷ್ಕರ, ಮೆರವಣಿಗೆ, ಪಾದಯಾತ್ರೆಗಳನ್ನು ಮಾಡುತ್ತಿದ್ದಾರೆ. ಒಂದು ವೇಳೆ ಅತ್ಯಾಧುನಿಕ ಆಸ್ಪತ್ರೆ ಜಿಲ್ಲೆಯಲ್ಲಿ ಪ್ರಾರಂಭವಾದರೆ ಅಲ್ಲಿ ಉತ್ತರ ಕನ್ನಡದ ಭೌಗೋಳಿಕ ಪರಿಸ್ಥಿತಿಯನ್ನು ತಿಳಿದಂತಹ ವೈದ್ಯರು ಸಿಗುವ ಲಕ್ಷಣಗಳಿಲ್ಲ. ಉತ್ತರ ಕನ್ನಡದ ಆಹಾರ, ವಿಹಾರ ಮಾತು ತಿಳಿದಿರುವ ವೈದ್ಯರು ಬರುವ ಸಾಧ್ಯತೆಯಂತೂ ಇಲ್ಲವೇ ಇಲ್ಲ. ಆದರೆ, ಈ ವಿಷಯದ ಬಗ್ಗೆ ಯಾರೂ ಈವರೆಗೆ ಗಂಭೀರ ಚಿಂತನೆ ನಡೆಸಿಲ್ಲ!
`ವರದಿಯ ಪ್ರಕಾರ 2024ರಲ್ಲಿ ಸರಕಾರಿ, ಖಾಸಗಿ, ಅನುದಾನಿತ ಪದವಿ ಪೂರ್ವ ಮಹಾವಿದ್ಯಾಲಯಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ NEET ಪರೀಕ್ಷೆಗೆ ಎದುರಿಸಿದ ವಿದ್ಯಾರ್ಥಿಗಳ ಸಂಖ್ಯೆ ಕೇವಲ 371. ಅದರಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ 144, ಅನುದಾನಿತ ಪದವಿ ಪೂರ್ವ ಕಾಲೇಜಿನ 12, ಅನುದಾನರಹಿತ ಪದವಿಪೂರ್ವ ಕಾಲೇಜಿನ 215 ವಿದ್ಯಾರ್ಥಿಗಳಿದ್ದಾರೆ. ಪರೀಕ್ಷೆ ಎದುರಿಸಿದವರಲ್ಲಿ ಯಶಸ್ಸು ಪಡೆದವರೆಷ್ಟು? ಎಂದು ಲೆಕ್ಕಾಚರ ಹಾಕಿದರೆ 3 ವಿದ್ಯಾರ್ಥಿಗಳು ಮಾತ್ರ. ಅವರು ದೇಶ-ವಿದೇಶಗಳ ಕಡೆ ಮುಖ ಮಾಡಿ, ಮಹಾನಗರಗಳಲ್ಲಿನ ಸೇವೆಗೆ ಹೋಗುವ ಸಾಧ್ಯತೆ ಹೆಚ್ಚಿದೆ’ ಎಂಬುದು ಡಾ ರವಿಕಿರಣ ಪಟವರ್ಧನ ಅವರ ಲೆಕ್ಕಾಚಾರ.
`NEETನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಅತ್ಯಂತ ಪ್ರಮುಖವಾಗಿ ಬೇಕಾಗಿದ್ದು ಸಿಬಿಎಸ್ಸಿ ಪಠ್ಯಕ್ರಮದ ಶಾಲೆಗಳು ಅಗತ್ಯ. ನೌಕಾನೆಲೆ, ಕೈಗಾ ಎನ್ಪಿಸಿಐಎಲ್ ಹಾಗೂ ಮಳಗಿಯ ನವೋದಯದಲ್ಲಿ ಸರಕಾರಿ ಸಿಬಿಎಸ್ಸಿ ಪಠ್ಯಕ್ರಮದ ಶಾಲೆಗಳಿವೆ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಕೇಂದ್ರೀಯ ವಿದ್ಯಾಲಯಗಳು ಸಿಬಿಎಸ್ಸಿ ಪಠ್ಯಕ್ರಮದ ಶಾಲೆಗಳನ್ನು ಉತ್ತರ ಕನ್ನಡದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶುರು ಮಾಡಿದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಇಲ್ಲಿನವರು ಹೆಚ್ಚಿನ ಸಂಖ್ಯೆಯಲ್ಲಿ ಸಾಧನೆ ಮಾಡುತ್ತಾರೆ’ ಎಂಬುದು ಅವರ ನಿಲುವು.
`ಹಿಂದಿನ ಸಂಸದರು ಶಿರಸಿ ಸಮೀಪ ದೊಡ್ಡನಳ್ಳಿಯಲ್ಲಿ ಸಿಬಿಎಸ್ಸಿ ಪಠ್ಯಕ್ರಮದ ಕೇಂದ್ರೀಯ ವಿದ್ಯಾಲಯ ತುರ್ತಾಗಿ ಪ್ರಾರಂಭವಾಗುವoಥಾಗಬೇಕು ಎಂದು ಯೋಚಿಸಿದ್ದರು. ಇಷ್ಟೆಲ್ಲ ವಿಷಯಗಳ ಮಧ್ಯ ಆರಕ್ಷಣೆ ಹೇಳುವ ಸಮಸ್ಯೆ ಎಂದೆoದಿಗೂ ಇದ್ದೇ ಇದೆ. ಭಾರತದಲ್ಲಿ ಅರ್ಹತೆಗೆ ರಕ್ಷಣೆ ಸಿಗುವಂತಾಗಬೇಕು. ಅಲ್ಲದೆ ಕೇಂದ್ರ ಸರ್ಕಾರದ ಇಡಬ್ಲ್ಯೂ ಎಸ್ ಆರಕ್ಷಣೆ ಕರ್ನಾಟಕದಲ್ಲಿ ಜಾರಿಗೆ ಬರಲಿಲ್ಲ ಎನ್ನುವುದು ಇನ್ನೊಂದು ಸಮಸ್ಯೆ’ ಎಂದು ಡಾ ರವಿಕಿರಣ ಪಟವರ್ಧನ್ ಅವರು ವಿವರಿಸಿದ್ದಾರೆ.
`ಈ ಕಾರಣ NEET ಪರೀಕ್ಷೆ ಎದುರಿಸುವ ಹಾಗೂ ಯಶಗಳಿಸುವ ಉತ್ತರ ಕನ್ನಡ ಮೂಲದ ವಿದ್ಯಾರ್ಥಿಗಳ ಸಂಖ್ಯೆ ಏರಿಕೆ ಆಗುವಂತೆ ಮಾಡಬೇಕು. ಹೆಚ್ಚಿನ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಕುಳಿತುಕೊಳ್ಳುವಂತೆ ಪ್ರತಿ ಪದವಿ ಪೂರ್ವ ಮಹಾವಿದ್ಯಾಲಯಗಳಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ವಿಶೇಷ ಅಭಿಯಾನವನ್ನು ಕೈಗೊಳ್ಳಬೇಕು’ ಎಂಬುದು ಅವರ ಹಕ್ಕೋತ್ತಾಯ.




