ಕುಮಟಾ: ಅಶೋಕ ಹೊಟೇಲಿನಲ್ಲಿ ಹೊಟ್ಟೆ ತುಂಬ ಊಟ ಮಾಡಿದ ಮೂವರು ಹೆಚ್ಚುವರಿಯಾಗಿ ಅನ್ನ ಪಡೆದಿದ್ದು, ಅದಕ್ಕೆ 20 ರೂಪಾಯಿ ಪಾವತಿಸಲು ತಕರಾರು ಮಾಡಿದ್ದಾರೆ. ಈ ವೇಳೆ `20 ರೂಪಾಯಿಗಾಗಿ ಯಾಕೆ ಜಗಳ ಮಾಡುತ್ತೀರಿ?’ ಎಂದು ಪ್ರಶ್ನಿಸಿದ ಗ್ರಾಹಕರಿಗೂ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ಹೊಡೆದಾಟದಲ್ಲಿ 15 ಅಡಿ ಮೇಲಿನಿಂದ ನೆಲಕ್ಕೆ ಬಿದ್ದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಜನವರಿ 14ರ ರಾತ್ರಿ ಗೋಕರ್ಣ ಮೇಲಿನಕೇರಿಯ ಅಶೋಕ ಹೊಟೇಲಿಗೆ ಕಲಘಟಗಿಯ ಮಾಲೇಶ ನಿಗದಿ, ಕಲ್ಮೇಶ ಗುಡಗುಡಿ ಹಾಗೂ ಕುಂದಗೋಳದ ಸಂತೋಷ ನುಲ್ವಿ ಹೋಗಿದ್ದರು. ಬಗೆ ಬಗೆಯ ಖಾದ್ಯಗಳನ್ನು ಪಡೆದು ಊಟ ಮಾಡಿದ ಅವರು ಹೆಚ್ಚುವರಿಯಾಗಿ ಒಂದು ಬಟ್ಟಲು ಅನ್ನವನ್ನು ಕೇಳಿ ಪಡೆದಿದ್ದರು. ಊಟ ಮುಗಿದ ನಂತರ ಹೆಚ್ಚುವರಿಯಾಗಿ ಪಡೆದ ಅನ್ನಕ್ಕೆ 20ರೂ ಪಾವತಿಸಲು ನಿರಾಕರಿಸಿದ್ದರು.
20ರೂಪಾಯಿ ಪಾವತಿ ವಿಷಯವಾಗಿ ಹೊಟೇಲ್ ಸಿಬ್ಬಂದಿ ಹಾಗೂ ಆ ಮೂವರು ಗ್ರಾಹಕರ ನಡುವೆ ಗಲಾಟೆ ಶುರುವಾಗಿತ್ತು. ಮಾತಿಗೆ ಮಾತು ಬೆಳೆದಿದ್ದರಿಂದ ಅಲ್ಲಿನ ವಾತಾವರಣವೂ ಗೊಂದಲದಿoದ ಕೂಡಿತ್ತು. ಈ ವೇಳೆ ಅದೇ ಹೊಟೇಲಿಗೆ ಬ್ಯಾಡಗಿಯ ಲೋಹಿತ ಕಟ್ಟಿ ತಮ್ಮ ಸ್ನೇಹಿತರ ಜೊತೆ ಊಟಕ್ಕೆ ಹೋಗಿದ್ದರು. ಅಲ್ಲಿನ ಜಗಳವನ್ನು ಬಗೆಹರಿಸುವುದಕ್ಕಾಗಿ ಅವರು ಪ್ರಯತ್ನಿಸಿದರು.
`20 ರೂಪಾಯಿಗಾಗಿ ಏಕೆ ಜಗಳ ಮಾಡುತ್ತೀರಿ?’ ಎಂದು ಆ ಮೂವರನ್ನು ಲೋಹಿತ್ ಕಟ್ಟಿ ಪ್ರಶ್ನಿಸಿದರು. ಇದರಿಂದ ಸಿಟ್ಟಾದ ಆ ಮೂವರು ಲೋಹಿತ ಕಟ್ಟಿ ಅವರನ್ನು ಥಳಿಸಿದರು. ಹೊಡೆದಾಟ ತಪ್ಪಿಸಲು ಬಂದ ಲೋಹಿತ ಕಟ್ಟಿ ಅವರ ಸ್ನೇಹಿತರಾದ ಪ್ರದೀಪ ಜಾದವ್, ದೊಡ್ಡಬಸಪ್ಪ ತೆರದಳ್ಳಿ ಹಾಗೂ ಶಿವಕುಮಾರ ಮೊಟ್ಟೆಬೆನ್ನೂರು ಅವರಿಗೂ ಕೈಯಿಂದ ಹೊಡೆದರು. ಇದರೊಂದಿಗೆ ಆ ಮೂವರು ಸೇರಿ ಲೋಹಿತ್ ಕಟ್ಟಿ ಅವರನ್ನು ಹೊಟೇಲ್ ಮೇಲ್ಮಹಡಿಯಿಂದ ಕೆಳಗೆ ದೂಡಿದರು.
ಪರಿಣಾಮ ಲೋಹಿತ ಕಟ್ಟಿ ಅವರು 15 ಅಡಿ ಆಳಕ್ಕೆ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡರು. ಲೋಹಿತ ಜೊತೆಗಿದ್ದ ಸ್ನೇಹಿತರು ಸಹ ಆ ಮೂವರು ಥಳಿಸಿದ್ದರಿಂದ ಗಾಯಗೊಂಡರು. ಈ ಎಲ್ಲಾ ವಿಚಾರದ ಬಗ್ಗೆ ದೊಡ್ಡಬಸಪ್ಪ ತೆರದಳ್ಳಿ ಪೊಲೀಸರಿಗೆ ದೂರು ನೀಡಿದ್ದು, ಗೋಕರ್ಣ ಪಿಎಸ್ಐ ಖಾದರ್ ಭಾಷಾ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.




