ಕಾರವಾರ: ಚಿತ್ತಾಕುಲಾ ಗ್ರಾಮದ ಸೀಬರ್ಡ ನಿರಾಶ್ರಿತರ ಕಾಲೋನಿಗೆ ಮೂಲಭೂತ ಸೌಕರ್ಯಗಳಿಲ್ಲದ ಬಗ್ಗೆ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಧ್ವನಿ ಎತ್ತಿದ್ದಾರೆ. ಅಲ್ಲಿ ಅಗತ್ಯ ಸೌಲಭ್ಯ ಒದಗಿಸುವ ಬಗ್ಗೆ ಬುಧವಾರ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರೀಯಾ ಅವರೊಂದಿಗೆ ಬುಧವಾರ ಚರ್ಚೆ ನಡೆಸಿದರು.
1999ರಲ್ಲಿ ಸೀಬರ್ಡ ನೌಕಾನೆಲೆಗಾಗಿ ಅಲ್ಲಿನ ಮೀನುಗಾರರನ್ನು ಒಕ್ಕಲೆಬ್ಬಿಸಲಾಯಿತು. ಆ ಬಡ ಮೀನುಗಾರರಿಗೆ ಚಿತ್ತಾಕುಲಾ, ಬಿಣಗಾ, ಸಂಕ್ರುಭಾಗ, ಅರಗಾ, ಅಲಿಗದ್ದಾ, ಕೋಡಾರ ಸೇರಿ ವಿವಿಧ ಪ್ರದೇಶಗಳಿಗೆ ಸ್ಥಳಾಂತರಿಸಲಾಯಿತು. ಆದರೆ, ಪುನರ್ವಸತಿ ಸ್ಥಳದಲ್ಲಿ ಅವರಿಗೆ ಅಗತ್ಯ ಸೌಲಭ್ಯ ನೀಡಲಿಲ್ಲ. 25 ವರ್ಷಗಳಿಂದ ಇಲ್ಲಿನ ಮೀನುಗಾರರು ಸಂತ್ರಸ್ತರಾಗಿಯೇ ಇದ್ದಾರೆ’ ಎಂದು ಗಣಪತಿ ಉಳ್ವೇಕರ್ ವಾಸ್ತವ ಸ್ಥಿತಿಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
`ನಿರಾಶ್ರಿತರು ವಾಸವಾಗಿರುವ ಕಡೆ ರಸ್ತೆ ಸಂಪರ್ಕವಿಲ್ಲ. ಮಳೆಗಾಲದ ನೀರು ಹರಿಯಲು ಚರಂಡಿಗಳಿಲ್ಲ. ವೃದ್ಧರು ಹಾಗೂ ಶಾಲಾ ಮಕ್ಕಳು ಸೇರಿ ಆ ಭಾಗದ ಎಲ್ಲಾ ಸಾರ್ವಜನಿಕರು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಅಗತ್ಯ’ ಎಂದವರು ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಲಕ್ಷ್ಮೀಪ್ರೀಯಾ `ಸೀಬರ್ಡ ನಿರಾಶ್ರಿತರ ಕಾಲೋನಿಯ ಅಭಿವೃದ್ಧಿಗೆ ತಹಶೀಲ್ದಾರರ ಅವರಿಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದ್ದು, ಅಭಿವೃದ್ಧಿಗೆ ಇರುವ ಅನುದಾನವನ್ನು ಸೂಕ್ತ ರೀತಿ ಬಳಸಲಾಗುವುದು’ ಎಂಬ ಭರವಸೆ ನೀಡಿದರು. ಚಿತ್ತಾಕುಲಾ ಗ್ರಾಮಸ್ಥರಾದ ಉಮೇಶ ತಾಂಡೇಲ್, ಮಾರುತಿ ತಾಂಡೇಲ್, ಪ್ರಶಾಂತ ತಾಂಡೇಲ್, ಗಣಪತಿ ತಾಂಡೇಲ್, ಮೀನುಗಾರ ಮುಖಂಡರಾದ ಗಣಪತಿ ಮಾಂಗ್ರೆ ಇತರರು ಇದ್ದರು.




