ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ಪದೋನ್ನತಿ ಪಡೆದು ಬೇರೆಡೆ ವರ್ಗವಾಗಿರುವ ರಾಜೇಂದ್ರ ನಾಯ್ಕ ಅವರಿಗೆ ಅವರ ಸಹದ್ಯೋಗಿಗಳು ಸನ್ಮಾನಿಸಿದ್ದು, ಈ ವೇಳೆ ಶಿಕ್ಷಕರೊಬ್ಬರು ತಾಮ್ರದ ಕೊಡವನ್ನು ಉಡುಗರೆಯಾಗಿ ನೀಡಿದ್ದಾರೆ.
ಕಾರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ರಾಜೇಂದ್ರ ನಾಯ್ಕ ಅವರು ಮೇಲ್ವಿಚಾರಕರಾಗಿದ್ದರು. ಕಡತವನ್ನು ಕೂಲಂಕುಷವಾಗಿ ಪರಿಶೀಲಿಸಿ ಅದನ್ನು ಮುಂದಿನ ಹಂತಕ್ಕೆ ತಲುಪಿಸುವ ಕೆಲಸವನ್ನು ರಾಜೇಂದ್ರ ನಾಯ್ಕ ಅವರು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. ಪ್ರಸ್ತುತ ರಾಜೇಂದ್ರ ನಾಯ್ಕ ಅವರು ಪತ್ರಾಂಕಿತ ಅಧಿಕಾರಿಯಾಗಿ ಪದೋನ್ನತಿ ಪಡೆದಿದ್ದಾರೆ. ಇದರೊಂದಿಗೆ ಚಿಕ್ಕೋಡಿ ಜಿಲ್ಲೆಯ ರಾಯಭಾಗಕ್ಕೆ ಅವರು ವರ್ಗವಾಗಿದ್ದಾರೆ. ಈ ಹಿನ್ನಲೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ತಾಲೂಕು ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಂಘದವರು ಅವರನ್ನು ಗೌರವಿಸಿದರು. ಬಿಆರ್ಸಿವತಿಯಿಂದಲೂ ಸನ್ಮಾನಿಸಲಾಯಿತು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಹಾಸ ರಾಯ್ಕರ ಅವರು ರಾಜೇಂದ್ರ ನಾಯ್ಕ ಅವರ ಸೇವೆಯನ್ನು ಸ್ಮರಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ವಿಠೋಬ ನಾಯಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್ ಪಿ ಗೌಡ, ಬಿ ಆರ್ ಸಿ ಪ್ರಭಾರಿ ಸಮನ್ವಯಾಧಿಕಾರಿ ಸುಜಾತಾ ಜಾವಕರ, ಪ್ರೌಢ ಶಾಲಾ ಮುಖ್ಯಾಧ್ಯಾಪಕರ ಸಂಘದ ಅಧ್ಯಕ್ಷ ದಿನೇಶ ಗಾಂವಕರ ಇತರರು ಹಾಜರಿದ್ದರು. ಈ ವೇಳೆ ನಗೆ ಶಾಲೆಯ ಮುಖ್ಯ ಶಿಕ್ಷಕ ಅಖ್ತರ ಸೈಯದ್ ಅವರು ವೈಯಕ್ತಿಕವಾಗಿ ರಾಜೇಂದ್ರ ನಾಯ್ಕ ಅವರಿಗೆ ತಾಮ್ರದ ಕೊಡ ಹಾಗೂ ತಾಂಬೂಲವನ್ನು ನೀಡಿ ಗೌರವಿಸಿದರು.




