ಪುರಾಣ ಪ್ರಸಿದ್ಧ ಗೋಕರ್ಣದ ರಾಮತೀರ್ಥದ ನೀರು ಬತ್ತಿರುವ ಬಗ್ಗೆ ವಿವಿಧ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿದ್ದು, ಇದು ಸತ್ಯವಲ್ಲ!
ಕಳೆದ ಮಳೆಗಾಲದ ಅವಧಿಯಲ್ಲಿ ರಾಮತೀರ್ಥದ ಬಳಿ ಗುಡ್ಡ ಕುಸಿತ ಉಂಟಾಗಿತ್ತು. ಅದರ ಪರಿಣಾಮ ಝರಿಯಿಂದ ನೀರು ಹರಿಯುವ ಮಾರ್ಗವನ್ನು ಮಣ್ಣು ಆವರಿಸಿತ್ತು. ಇದರಿಂದ ರಾಮತೀರ್ಥದ ಬಳಿ ಬರುವ ನೀರು ಅಲ್ಲೇ ಪಕ್ಕದ ಇನ್ನೊಂದು ಕಡೆ ಬೀಳುತ್ತಿತ್ತು. ರಾಮಮಂದಿರದ ಅರ್ಚಕರು ಹಾಗೂ ಹರಿಹರೇಶ್ವರ ಪಾಠಶಾಲೆಯವರು ಸೇರಿ ಮೊದಲಿನ ಮಾರ್ಗವನ್ನು ಸರಿಪಡಿಸಿದ್ದು, ಅದಾದ ನಂತರ ರಾಮತೀರ್ಥ ಸ್ಥಳದಲ್ಲಿಯೇ ನೀರು ಬರುತ್ತಿದೆ.
ಮೊದಲಿಗೆ ಹೋಲಿಸಿದರೆ ಇದೀಗ ನೀರು ಬರುವ ಪ್ರಮಾಣ ಕಡಿಮೆಯಾಗಿದೆ ಎಂಬುದು ಸತ್ಯ. ಆದರೆ, ರಾಮತೀರ್ಥದಲ್ಲಿ ನೈಸರ್ಗಿಕವಾಗಿ ಹರಿಯುವ ನೀರು ಈವರೆಗೂ ಬತ್ತಿಲ್ಲ. ಇನ್ನೂ ಜನರ ಅನುಕೂಲಕ್ಕಾಗಿ ರಾಮತೀರ್ಥದ ಬಳಿ ಪೈಪ್ ಲೈನ್ ಅಳವಡಿಸಿದ್ದು, ಆ ಪೈಪಿನಲ್ಲಿ ಬರುವ ನೀರನ್ನು ಸಾರ್ವಜನಿಕರು ಪಡೆಯುತ್ತಿದ್ದಾರೆ. ಇದರಿಂದಾಗಿಯೂ ರಾಮತೀರ್ಥ ಕ್ಷೇತ್ರದಲ್ಲಿ ನೀರು ಕಡಿಮೆಯಾದಂತೆ ಭಾಸವಾಗುತ್ತಿದೆ. ಬೇಸಿಗೆಯ ಅವಧಿಯಲ್ಲಿ ನೀರಿನ ಪ್ರಮಾಣ ಇನ್ನಷ್ಟು ಕಡಿಮೆಯಾಗುತ್ತದೆ. ಆದರೆ, ಈವರೆಗೂ ಇಲ್ಲಿ ನೀರು ಬತ್ತಿದ ಉದಾಹರಣೆಗಳಿಲ್ಲ.
ಪ್ರಸ್ತುತ ಝರಿಯಲ್ಲಿರುವ ಮಣ್ಣು ತೆಗೆದರೆ ಮೊದಲಿನ ಹಾಗೇ ರಭಸದಿಂದ ನೀರು ಬರುವ ಸಾಧ್ಯತೆಯಿದೆ. ಈ ನೀರನ್ನು ಸ್ಥಳೀಯರು ನಿತ್ಯ ಕುಡಿಯಲು ಬಳಸುತ್ತಿದ್ದು, ಆಗಾಗ ಪ್ರವಾಸಿಗರು ಸಹ ಕೊಂಡೊಯ್ಯುತ್ತಾರೆ.




