ಕಳೆದ ಎರಡು ತಿಂಗಳಿನಿoದ ಹೊನ್ನಾವರದ ವಂದಿಗೆ ಜಡ್ಡಿಗದ್ದೆ ಭಾಗದಲ್ಲಿ ಜನರ ನಿದ್ದೆಗೆಡಿಸಿದ್ದ ಚಿರತೆ ಶುಕ್ರವಾರ ರಾತ್ರಿ ಬೋನಿಗೆ ಬಿದ್ದಿದೆ. ಊರಿನವರು ತಿಂಗಳುಗಳ ಕಾಲ ಚಿರತೆ ಸೆರೆಹಿಡಿಯುವ ಸಾಹಸ ನಡೆಸಿದ್ದು, ಕೊನೆಗೂ ಮರಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ.
ಈ ಹಿಂದೆ ಬೈಕಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿತ್ತು. ಅದಾದ ನಂತರ ವ್ಯಕ್ತಿಯೊಬ್ಬರ ಕಾಲು ಕಚ್ಚಿ ಗಾಯಗೊಳಿಸಿತ್ತು. ರಸ್ತೆ ಅಂಚಿನ ಜನವಸತಿ ಪ್ರದೇಶಗಳಲ್ಲಿ ಸಹ ಚಿರತೆ ಕಾಣಿಸಿಕೊಂಡಿತ್ತು. ಅದಲ್ಲದೇ 10ಕ್ಕೂ ಅಧಿಕ ದನಗಳನ್ನು ಚಿರತೆ ಭಕ್ಷಿಸಿದ್ದು, ಕೆಲ ಜಾನುವಾರುಗಳು ಅರೆಜೀವದೊಂದಿಗೆ ಕೊಟ್ಟಿಗೆ ಸೇರಿದ್ದವು. ಇನ್ನೂ ಮನೆಯಲ್ಲಿ ಸಾಕಿದ ನಾಯಿ ಕಾಣೆಯಾಗಿದ್ದು ಲೆಕ್ಕಕ್ಕೆ ಸಿಕ್ಕಿರಲಿಲ್ಲ.
ಈ ಎಲ್ಲಾ ಹಿನ್ನಲೆ ಹೊಸಾಕುಳಿ, ಸಾಲ್ಕೋಡ, ಸಂತೆಗುಳಿ ಭಾಗದ ಜನ ಚಿರತೆ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು. ಅದರ ಪ್ರಕಾರ ಅರಣ್ಯ ಇಲಾಖೆಯವರು ವಾರದ ಹಿಂದೆ ಊರಿಗೆ ಬೋನು ತಂದಿರಿಸಿ ಹೋಗಿದ್ದರು. ವಂದೂರಿನ ಜಡ್ಡಿಗದ್ದೆ ಬಳಿ ಬೋನು ಇರಿಸಿದ್ದ ನಿವೃತ್ತ ಪ್ರಾಧ್ಯಾಪಕ ಜಿ ಎಸ್ ಭಟ್ಟ ಹಾಗೂ ಸೀತಾರಾಮ ಹೆಗಡೆ ನಿತ್ಯವೂ ಬೋನಿನ ಒಳಗೆ ನಾಯಿ ಬಿಟ್ಟು ಚಿರತೆ ಆಗಮನಕ್ಕಾಗಿ ಕಾಯುತ್ತಿದ್ದರು.
ಅದರಂತೆ, ಶುಕ್ರವಾರ ರಾತ್ರಿಯೂ ಅವರು ಬೋನಿನ ಒಳಗೆ ನಾಯಿ ಬಿಟ್ಟು ಚಿರತೆಗೆ ಆಹಾರದ ಆಸೆ ಹುಟ್ಟಿಸಿದ್ದರು. ಈ ವೇಳೆ ಮರಿ ಚಿರತೆಯೊಂದು ಅಲ್ಲಿಗೆ ಬಂದು ಬೋನಿನ ಒಳಗೆ ಬಿದ್ದಿತು. ಚಿರತೆ ಬೋನಿನ ಒಳಗೆ ಪ್ರವೇಶಿಸಿದ ಕೂಡಲೇ ಅದರ ಬಾಗಿಲು ಮುಚ್ಚಿಕೊಂಡಿದ್ದು, ಬೋನಿನಿಂದ ಹೊರ ಬರಲು ಸಾಧ್ಯವಾಗಲಿಲ್ಲ. ಬೋನಿನ ಇನ್ನೊಂದು ಭಾಗದ ಪಂಚರದಲ್ಲಿ ನಾಯಿ ಇದ್ದಿದ್ದರಿಂದ ಅದನ್ನು ಭಕ್ಷಿಸಲು ಚಿರತೆಯಿಂದ ಆಗಲಿಲ್ಲ.
ಚಿರತೆ ಬೋನಿಗೆ ಬಿದ್ದ ವಿಷಯ ಅರಿತ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಚಿರತೆಯನ್ನು ಸ್ಥಳಾಂತರಿಸುವ ಕೆಲಸ ನಡೆದಿದೆ. ಇನ್ನೂ, ಸೆರೆ ಸಿಕ್ಕಿರುವುದು ಮರಿ ಚಿರತೆ ಆಗಿದ್ದರಿಂದ ದಾಳಿ ನಡೆಸುವ ದೊಡ್ಡ ಚಿರತೆಗಳ ಓಡಾಟವೂ ಇಲ್ಲಿರುವ ಅನುಮಾನಗಳಿವೆ. ಆದರೆ, ಇದು ಮನುಷ್ಯರ ಮೇಲೆ ದಾಳಿ ನಡೆಸಿದ ಚಿರತೆಯಾ? ಅಥವಾ ಬೇರೆ ಚಿರತೆಯಾ? ಎಂಬ ಬಗ್ಗೆ ಈವರೆಗೂ ಖಚಿತವಾಗಿಲ್ಲ.




