10 ಜನರ ಸಾವಿಗೆ ಕಾರಣವಾದ ಅರಬೈಲ್ ಪ್ರದೇಶಕ್ಕೆ ಬುಧವಾರ ರಾತ್ರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಸಂಚಾರ ವಿಭಾಗದ ಎಡಿಜಿಪಿ ಶರಶ್ಚಂದ್ರ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ನಸುಕಿನ ಅವಧಿಯಲ್ಲಿ ಈ ಅಪಘಾತ ನಡದಿದ್ದು, ಅಪಾರ ಪ್ರಮಾಣದಲ್ಲಿ ಮಂಜು ಮುಸುಕಿತ್ತು. ನಿದ್ರೆಯ ಮಂಪರು ಹಾಗೂ ಅತಿ ವೇಗ ಈ ಅಪಘಾತಕ್ಕೆ ಕಾರಣ ಎಂದು ಅಂದಾಜಿಸಲಾಗಿದೆ’ ಎಂದರು. ಲಾರಿ ಚಾಲಕ ನಿಜಾಂ ಪೊಲೀಸ್ ವಶದಲ್ಲಿದ್ದು ವಿಚಾರಣೆ ಮುಂದುವರೆದಿದೆ’ ಎಂದು ತಿಳಿಸಿದರು. ‘ಅಪಘಾತವಾದ ಲಾರಿಯಲ್ಲಿ 29 ಜನ ಇದ್ದರು. ಕ್ಯಾಬೀನ್’ನಲ್ಲಿಯೇ 13 ಜನ ಇದ್ದರು. 10 ಜನ ಸಾವನಪ್ಪಿದ್ದು, ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದರು.
‘ಸರಕು ಸಾಗಾಣಿಕಾ ವಾಹನದಲ್ಲಿ ಇಷ್ಟು ಜನರ ಸಾಗಾಟವೂ ಅಪರಾಧ. ಆ ಬಗ್ಗೆಯೂ ತನಿಖೆ ನಡೆಯುತ್ತಿದೆ’ ಎಂದರು. ‘ಅಪಘಾತವಾದ ವಾಹನದಲ್ಲಿ ಯಾವುದೇ ದೋಷ ಇರಲಿಲ್ಲ. ಟೈಯರ್ ಸ್ಪೋಟವಾಗಿಲ್ಲ. ಎದುರಿನಿಂದ ವಾಹನ ಬಂದಿದ್ದರಿಂದ ನಡೆದ ಅಪಘಾತವೂ ಇದಲ್ಲ’ ಎಂದು ಸ್ಪಷ್ಠಪಡಿಸಿದರು.
‘ಹೆದ್ದಾರಿ ಅಂಚಿನಲ್ಲಿ ಪ್ರಾಧಿಕಾರದವರು ಟ್ರೆಂಚ್ ನಿರ್ಮಿಸುತ್ತಿದ್ದಾರೆ. ಅಪಘಾತ ತಡೆಗೆ ವಾಲ್ ನಿರ್ಮಿಸುವಂತೆ ಸೂಚಿಸಲಾಗಿದೆ’ ತಿಳಿಸಿದರು. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ ನಾರಾಯಣ್, ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರಾದ ಸಕಲೇಶ್ ಕಾಡ್ಲೂರು, ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ, ಯಲ್ಲಾಪುರ ಪಿಐ ರಮೇಶ್ ಹಾನಾಪುರ ಇದ್ದರು.




