ಸಂತೆಗೆ ಹೋಗುತ್ತಿದ್ದ ಸವಣೂರಿನ ವ್ಯಾಪಾರಿಗಳು ಸಾವನಪ್ಪಿದ ಕಾರಣ ರಾಜ್ಯ ಸರ್ಕಾರ ಸಾವನಪ್ಪಿದ 10 ಜನರ ಕುಟುಂಬಕ್ಕೆ ತಲಾ 3 ಲಕ್ಷ ರೂ ಪರಿಹಾರ ಘೋಷಿಸಿದೆ. ಇದರೊಂದಿಗೆ ಕೇಂದ್ರ ಸರ್ಕಾರ ಸಹ ತಲಾ 2 ಲಕ್ಷ ರೂ ಪರಿಹಾರ ಘೋಷಿಸಿದ್ದು, ಸಂತ್ರಸ್ತ ಕುಟುಂಬಗಳಿಗೆ 5 ಲಕ್ಷ ರೂ ಪರಿಹಾರ ಮೊತ್ತ ಸಿಗಲಿದೆ. ಒಂದೇ ಅಪಘಾತದಲ್ಲಿ 10 ಜನ ಸಾವನಪ್ಪಿದ ಕಾರಣ ಈ ಪರಿಹಾರ ಸಿಕ್ಕಿದ್ದು, ಈವರೆಗೆ ಸಾವಿರಾರು ಜನ ರಸ್ತೆ ಅಪಘಾತದಲ್ಲಿ ಸಾವನಪ್ಪಿದರೂ ಆ ಸಂತ್ರಸ್ತರಿಗೆ ಯಾವುದೇ ಸರ್ಕಾರದಿಂದ ಈ ಬಗೆಯ ಪರಿಹಾರ ಸಿಕ್ಕಿಲ್ಲ!
ಅಪರಿಚಿತ ವಾಹನಗಳು ಗುದ್ದಿ ಸಾವನಪ್ಪಿದವರ ಕುಟುಂಬಕ್ಕೆ ಸರ್ಕಾರದಿಂದ 2 ಲಕ್ಷ ರೂ ಪರಿಹಾರ ನೀಡಲಾಗುತ್ತದೆ. `ಹಿಟ್ & ರನ್’ ಪ್ರಕರಣಗಳನ್ನು ಗುರುತಿಸಿ ಸಂತ್ರಸ್ತರ ಕುಟುಂಬಕ್ಕೆ ಈ ಪರಿಹಾರ ಒದಗಿಸುವಂತೆ ಕೆಲ ತಿಂಗಳ ಹಿಂದೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ. ಅದರ ಪ್ರಕಾರ ಅಪರಿಚಿತ ವಾಹನಗಳ ಅಪಘಾತದಿಂದ ಸಂತ್ರಸ್ತರಾದವರು ಆಯಾ ತಾಲೂಕಿನ ತಹಶೀಲ್ದಾರ್ ಕಚೇರಿ ಸಂಪರ್ಕಿಸಿ ವಿವರ ನೀಡುವಂತೆಯೂ ಕೋರಲಾಗಿದೆ. ಆದರೆ, ಈವರೆಗಿನ ಇತಿಹಾಸದಲ್ಲಿ ರಸ್ತೆ ಅಪಘಾತದಲ್ಲಿ ಸಾವನಪ್ಪಿದವರ ಸಂಖ್ಯೆ ಸಾವಿರಕ್ಕೂ ಅಧಿಕವಿದ್ದರೂ ಅಂಥವರ ಕುಟುಂಬಕ್ಕೆ ಈ ಪ್ರಮಾಣದಲ್ಲಿ ಪರಿಹಾರ ಸಿಕ್ಕ ಉದಾಹರಣೆಗಳಿಲ್ಲ. ಅದರಲ್ಲಿಯೂ ಸರಕು ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸಿದ ಅಪರಾಧವಾಗಿದ್ದರೂ, ಅಂಥ ಸಾವು-ನೋವುಗಳಿಗೆ ಪರಿಹಾರ, ಉಚಿತ ಚಿಕಿತ್ಸೆ ನೀಡುತ್ತಿರುವುದು ಇದೇ ಮೊದಲು!
ಬುಧವಾರ ಕುಮಟಾದಲ್ಲಿ ನಡೆದ ಅಪಘಾತದಲ್ಲಿಯೂ ಒಬ್ಬರು ಸಾವನಪ್ಪಿದ್ದಾರೆ. ಭಟ್ಕಳದಲ್ಲಿ ನಡೆದ ಅಪಘಾತದಲ್ಲಿಯೂ ಸಾವು-ನೋವುಗಳಾಗಿದೆ. ಆದರೆ, ಯಲ್ಲಾಪುರದಲ್ಲಿ ಸಾವನಪ್ಪಿದ ಸವಣೂರಿನ ತರಕಾರಿ ವ್ಯಾಪಾರಿಗಳ ಶವ ಹಾಗೂ ಸಂತ್ರಸ್ತರಿಗೆ ಸಿಕ್ಕ ಗೌರವ, ಪರಿಹಾರ ಅಲ್ಲಿನವರಿಗೆ ಸಿಕ್ಕಿಲ್ಲ. ಸವಣೂರಿನ ವ್ಯಾಪಾರಿಗಳ ಶವವನ್ನು ಪೊಲೀಸ್ ಗೌರವದೊಂದಿಗೆ ಅವರ ಊರಿಗೆ ತಲುಪಿಸಲಾಗಿದೆ. ಸವಣೂರಿನ ಶಾಸಕ ಯಾಸೀನ್ ಪಠಾಣ್ ಸ್ವತಃ ಹಾಜರಿದ್ದು, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಸೇರಿ ಅನೇಕ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿಕೊಂಡಿದ್ದಾರೆ. ಜೊತೆಗೆ ಶವ ಹಸ್ತಾಂತರದ ವೇಳೆ ಆ ಅಧಿಕಾರಿಗಳಿಂದಲೇ ಪರಿಹಾರದ ಮೊತ್ತವನ್ನು ಕೊಡಿಸಿದ್ದಾರೆ.
ಸಾಮಾನ್ಯವಾಗಿ ಅಪಘಾತಗಳು ನಡೆದಾಗ ಸಾವನಪ್ಪಿದವರಿಗಿಂತಲೂ ಅವರ ಕುಟುಂಬದವರೇ ಶವದ ನೋವು ಅನುಭವಿಸುತ್ತಾರೆ. ಅದರಲ್ಲಿಯೂ ಬದುಕಲು ಆಗದೇ-ಸಾವಿಗೂ ಅವಕಾಶವಿಲ್ಲದೇ ಅಂಗವೈಕಲ್ಯದಿAದ ಬಳಲುತ್ತಿರುವವರು ಇಡೀ ಜೀವನ ನರಕ ಅನುಭವಿಸುತ್ತಾರೆ. ಸಂತ್ರಸ್ತ ಕುಟುಂಬದವರಿಗೆ ಸರ್ಕಾರದಿಂದ ಆ ವೇಳೆ ನೆರವು ನೀಡುವ ಸಾಧ್ಯತೆ ಕಡಿಮೆ. ಅಪಘಾತವಾದ ವಾಹನಕ್ಕೆ ವಿಮೆ ಇದ್ದರೂ ಆ ಹಣ ಸಂತ್ರಸ್ತರಿಗೆ ಸಿಗಲು ಹಲವು ವರ್ಷಗಳೇ ಬೇಕು. ವಿಮಾ ಕಂಪನಿ ತಕರಾರು ಮುಂದುವರೆದರೆ ನ್ಯಾಯಾಲಯದಲ್ಲಿ ನ್ಯಾಯಕ್ಕಾಗಿ ಸಂತ್ರಸ್ತರು ಅಲೆದಾಟ ನಡೆಸಬೇಕು. ಇಂಥ ಹಲವು ಪ್ರಕರಣಗಳು ಜಿಲ್ಲೆಯಲ್ಲಿದ್ದು, ಸಾವನಪ್ಪಿದವರ ಕುಟುಂಬದವರು ಈಗಲೂ ಪರಿಹಾರ ಹಣಕ್ಕಾಗಿ ನ್ಯಾಯಾಲಯ ಅಲೆದಾಟ ನಡೆಸುತ್ತಿದ್ದಾರೆ.




