ರೈತರೊಬ್ಬರು ಗೋದಾಮಿನಲ್ಲಿ ದಾಸ್ತಾನು ಮಾಡಿದ್ದ ಅಡಿಕೆ ಕಳ್ಳರ ಪಾಲಾಗಿದೆ. ಅಡಿಕೆ ಕದ್ದ ಕಳ್ಳರು ರಸ್ತೆ ತುಂಬೆಲ್ಲ ಅಡಿಕೆ ಬೀರುತ್ತ ಹೋಗಿದ್ದರಿಂದಲೇ ಅಡಿಕೆ ಕಳ್ಳತನ ನಡೆದ ಕೆಲವೇ ತಾಸಿನೊಳಗೆ ಈ ಬಗ್ಗೆ ರೈತರಿಗೆ ಅರಿವಾಗಿದೆ!
ಶಿರಸಿ ಬನವಾಸಿ ಬಳಿಯ ಅಂಡಲಗಿ ಕೊರ್ಲಕಟ್ಟಾ ರಸ್ತೆಯ ಮಹಮದ್ ಶಫಿ ಅವರು ತಮ್ಮ ಒಡೆತನದ ಅಡಿಕೆ ಸಂಗ್ರಹಣಾ ಕೊಠಡಿಯಲ್ಲಿ ಅಡಿಕೆ ದಾಸ್ತಾನು ಮಾಡಿದ್ದರು. ಜನವರಿ 21ರ ರಾತ್ರಿ ಸಿಪ್ಪೆಸಹಿತ ಒಣಗಿದ ಆ ಎಲ್ಲಾ ಅಡಿಕೆಯನ್ನು ತೂಕ ಮಾಡಿ ತಲಾ 20ಕೆಜಿಯಂತೆ ಚೀಲದಲ್ಲಿ ತುಂಬಿಸಿದ್ದರು. ಒಟ್ಟು 52 ಚೀಲಗಳನ್ನು ಅವರು ಒಂದರ ಮೇಲೆ ಒಂದರoತೆ ಇರಿಸಿ ಆ ದಿನ ರಾತ್ರಿ ಮನೆ ಸೇರುವಾಗ 8 ಗಂಟೆ ಕಳೆದಿತ್ತು.
ರಾತ್ರಿಯ ಗಡಿಬಿಡಿಯಲ್ಲಿ ಗೋದಾಮಿನ ಬಾಗಿಲು ಹಾಕಿದ ಮಹಮದ್ ಶಫಿ ಅದಕ್ಕೆ ಬೀಗ ಹಾಕಲು ಮರೆತಿದ್ದರು. ಜನವರಿ 22ರ ಬೆಳಗ್ಗೆ 5.10ರ ಆಸುಪಾಸಿನಲ್ಲಿ ಮಹಮದ್ ಶಫಿ ಅವರ ತಮ್ಮ ನಮಾಜ್’ಗೆ ಹೋಗುವಾಗ ರಸ್ತೆಯ ಮೇಲೆ ಅಡಿಕೆ ಬಿದ್ದಿರುವುದನ್ನು ಗಮನಿಸಿದರು. ಮಹಮದ್ ಶಫಿ ಸಹ ನಮಾಜ್ ಮುಗಿಸಿ ಬರುವಾಗ 6.45ರ ಸಮಯವಾಗಿದ್ದು, ರಸ್ತೆ ತುಂಬ ಸಿಪ್ಪೆಸಹಿತ ಒಣಗಿದ ಅಡಿಕೆ ಚಲ್ಲಾಪಿಲ್ಲಿಯಾಗಿತ್ತು.
ಅದಾದ ನಂತರ ಅವರು ತಮ್ಮ ಗೋದಾಮಿಗೆ ಹೋಗಿ ಪರಿಶೀಲನೆ ನಡೆಸಿದ್ದು, ಅಲ್ಲಿದ್ದ ಅಡಿಕೆ ಮೂಟೆಗಳು ಕಾಣೆಯಾಗಿದ್ದವು. 52 ಮೂಟೆಗಳ ಪೈಕಿ 35 ಅಡಿಕೆ ಮೂಟೆಗಳನ್ನು ಕಳ್ಳರು ಹೊತ್ತೊಯ್ದಿದ್ದರು. ಇದರಿಂದ ಮಹಮದ್ ಶಫಿ ಅವರಿಗೆ ಅಂದಾಜು 80 ಸಾವಿರ ರೂ ನಷ್ಟವಾಗಿದ್ದು, `ಕಳ್ಳರನ್ನು ಹುಡುಕಿ ಅಡಿಕೆ ಮರಳಿಸಿ’ ಎಂದು ಅವರು ಪೊಲೀಸ್ ದೂರು ನೀಡಿದ್ದಾರೆ.




