ಕಾಂಗ್ರೆಸ್ ಮುಖಂಡ, ಉದ್ಯಮಿ, ಸಾಮಾಜಿಕ ಹೋರಾಟಗಾರ ಯಶೋಧರ ನಾಯ್ಕ ಅವರನ್ನು ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡುವುದಾಗಿ ಬೆದರಿಸಿದ್ದಾರೆ. ಶ್ರೀ ಯಶೋಧರ ನಾಯ್ಕ ಟ್ರಸ್ಟಿನ ಮೂಲಕ 15 ಲಕ್ಷ ರೂ ಲಪಟಾಯಿಸಿದ ಆ ಮಹಿಳೆ ಮತ್ತೆ 25 ಲಕ್ಷ ರೂ ಕೊಡುವಂತೆ ಬೇಡಿಕೆಯಿಟ್ಟಿದ್ದು, ಇದರಿಂದ ತಲೆಕೆಟ್ಟ ಯಶೋಧರ ನಾಯ್ಕ ಪೊಲೀಸರ ಮೊರೆ ಹೋಗಿದ್ದಾರೆ!
ಕುಮಟಾದ ಯಶೋಧರ ನಾಯ್ಕ ಅವರು ಯಶೋಧರ ನಾಯ್ಕ ಟ್ರಸ್ಟ್ ನಡೆಸುತ್ತಾರೆ. ಬ್ಯಾಂಕ್ ಸಹಯೋಗದಲ್ಲಿ ಅವರು ಸ್ವ ಸಹಾಯ ಸಂಘಗಳಿಗೆ ಆರ್ಥಿಕ ನೆರವು ನೀಡುತ್ತಾರೆ. ಹಲವು ಮಹಿಳೆಯರಿಗೆ ಅವರು ತಮ್ಮ ಟ್ರಸ್ಟಿನ ಮೂಲಕ ಉದ್ಯೋಗ ನೀಡಿದ್ದಾರೆ. ಇದರೊಂದಿಗೆ ಸಾಮಾಜಿಕ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ರಾಜಕೀಯವಾಗಿಯೂ ಪ್ರಭಾವ ಹೊಂದಿದ್ದಾರೆ. ಈ ಹಿಂದೆ ಭಟ್ಕಳ ಹಾಗೂ ಕುಮಟಾ ಕ್ಷೇತ್ರ ಪ್ರತಿನಿಧಿಸಿ ಅವರು ಪಕ್ಷೇತರರಾಗಿ ವಿಧಾನಸಭಾ ಚುನಾವಣೆಯನ್ನು ಸಹ ಎದುರಿಸಿದ್ದರು.
ಯಶೋಧರ ನಾಯ್ಕ ಟ್ರಸ್ಟಿನಲ್ಲಿ ಕೆಲಸ ಮಾಡುತ್ತಿದ್ದ ಶಿರಸಿ ಇಂದಿರಾನಗರದ ಮುಸ್ಕಾನ್ ಮುಕಂದರ್ ಎಂಬಾತರು ಟ್ರಸ್ಟಿನ ಎಲ್ಲಾ ವ್ಯವಹಾರಗಳನ್ನು ಅರಿತಿದ್ದರು. ಸ್ವ ಸಹಾಯ ಸಂಘದವರು ಮರುಪಾವತಿ ಮಾಡಿದ 15 ಲಕ್ಷ ರೂ ಹಣವನ್ನು ಬ್ಯಾಂಕಿಗೆ ತುಂಬಿರಲಿಲ್ಲ. ಆ ಹಣವನ್ನು ಸ್ವಂತ ಬಳಕೆಗೆ ಉಪಯೋಗಿಸಿಕೊಂಡು ದುರುಪಯೋಗಪಡಿಸಿಕೊಂಡಿದ್ದರು. ಇದರಿಂದ ಟ್ರಸ್ಟ್ ಜೊತೆ ಟ್ರಸ್ಟಿನ ಅಡಿ ಬರುವ ಸ್ವ ಸಹಾಯ ಸಂಘದವರಿಗೆ ಸಹ ಹಾನಿಯಾಗಿತ್ತು.
ಈ ಬಗ್ಗೆ ಪ್ರಶ್ನಿಸಿದಾಗ ಯಶೋಧರ ನಾಯ್ಕ ಅವರಿಗೆ ಮುಸ್ಕಾನ್ ಬೆದರಿಸಿದ್ದು, ಆಕೆಯ ಅಣ್ಣ ಮೀರಾಸಾಬ್ ಮುಕಂದರ್ ಮೂಲಕ 25 ಲಕ್ಷ ರೂಪಾಯಿ ನೀಡುವಂತೆ ಒತ್ತಡ ಬಂದಿತ್ತು. `ಈ ಹಣ ನೀಡದೇ ಇದ್ದರೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿ ಮಾನ ಹರಾಜು ಹಾಕುವೆ’ ಎಂದು ಸಹ ಮುಸ್ಕನ್ ಹೆದರಿಸಿದ್ದರು. `ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿ ಕೋಟು-ಕಚೇರಿ ಅಲೆದಾಡಿಸುವೆ’ ಎಂದು ಸಹ ಮುಸ್ಕನ್ ಹೇಳಿದ್ದು, ಇದರಿಂದ ಬೆದರಿದ ಯಶೋಧರ ನಾಯ್ಕ ಅವರು ತಾವೇ ಮೊದಲಾಗಿ ಪೊಲೀಸ್ ದೂರು ನೀಡಿದ್ದಾರೆ. ಮುಸ್ಕನ್ ಹಾಗೂ ಮೀರಾಸಾಬ್ ಸೇರಿ ತನ್ನನ್ನು ಕೊಚ್ಚಿ ಕೊಲೆ ಮಾಡುವುದಾಗಿ ಹೇಳಿರುವ ಬಗ್ಗೆಯೂ ಅವರು ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಯಶೋಧರ ನಾಯ್ಕ ಅವರ ದೂರು ಸ್ವೀಕರಿಸಿದ ಪೊಲೀಸರು ವಂಚಕಿ ಮುಸ್ಕನ್ ಹಾಗೂ ಆಕೆಯ ಅಣ್ಣ ಮೀರಾಸಾಬ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.




