ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸವೋಚ್ಛ ನ್ಯಾಯಾಲಯದ ಆದೇಶಕ್ಕೆ ವ್ಯತಿರಿಕ್ತವಾಗಿ ಅರಣ್ಯವಾಸಿಗಳ ಅರ್ಜಿ ಪುನರ್ ಪರಿಶೀಲನೆ ನಡೆಸುತ್ತಿರುವುದಕ್ಕೆ ಅತಿಕ್ರಮಣದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ 5 ಸಾವಿರಕ್ಕೂ ಅಧಿಕ ಅರ್ಜಿಗಳು ಸರ್ಕಾರಕ್ಕೆ ಸಲ್ಲಿಕೆಯಾಗಿದೆ!
ಶಿರಸಿ ಉಪವಿಭಾಗ ಅಧಿಕಾರಿ ಮತ್ತು ಉಪವಿಭಾಗ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷೆ ಕಾವ್ಯರಾಣಿ ಅವರ ಕಚೇರಿಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಅತಿಕ್ರಮಣದಾರರು ಆಕ್ಷೇಪಣಾ ಪತ್ರ ಸಲ್ಲಿಸಿದರು. ಅಪೂರ್ಣ, ಅಸ್ತಿತ್ವವಿಲ್ಲದ ಕಾನೂನುಬಾಹಿರ ಹಕ್ಕು ಸಮಿತಿಗಳು ಅರ್ಜಿ ಪರಿಶೀಲನೆ ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಆ ಸಮಿತಿಯಲ್ಲಿ ಶೇ 50ರಷ್ಟು ಸದಸ್ಯರ ಅನುಪಸ್ಥಿತಿಯಲ್ಲಿ ಅರ್ಜಿ ವಿಲೇವಾರಿ ಮಾಡುತ್ತಿರುವ ಬಗ್ಗೆಯೂ ಅತಿಕ್ರಮಣದಾರರು ವಿರೋಧಿಸಿದ್ದಾರೆ.
ಆಕ್ಷೇಪಣೆ ಸಲ್ಲಿಸಲು ಬರುವ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಿದಾಗಿಯೂ ಉಪವಿಭಾಗ ಅಧಿಕಾರಿ ಕಾವ್ಯಾರಾಣಿ ಕಚೇರಿಯಲ್ಲಿರದ ಬಗ್ಗೆಯೂ ಅತಿಕ್ರಮಣದಾರರು ಆಕ್ಷೇಪಿಸಿದರು. ತಹಶೀಲ್ದಾರ್ ಆಗಮಿಸಿ ಅವರ ಮನವಿ ಆಲಿಸಿದರು. `ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಅರಣ್ಯವಾಸಿಗಳೊಂದಿಗೆ ಉಪ ವಿಭಾಗ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷರು ಹಾಗೂ ಉಪವಿಭಾಗ ಅಧಿಕಾರಿಗಳಾದ ಕಾವ್ಯ ರಾಣಿ ಅವರು ಮುಂದಿನ ಒಂದು ವಾರದಲ್ಲಿ ಮುಕ್ತವಾಗಿ ಚರ್ಚೆ ಮಾಡಲು ಬಯಸಿಲಿದ್ದಾರೆ’ ಎಂದು ತಹಶೀಲ್ದಾರ್ ಶ್ರೀಧರ ಮುಂದಲಮನೆ ತಿಳಿಸಿದರು.
ಸಂಘಟನೆಯ ಜಿಲ್ಲಾ ಸಂಚಾಲಕಾರಾದ ಇಬ್ರಾಹಿಂ ಗೌಡಳ್ಳಿ, ನೆಹರು ನಾಯ್ಕ ಬಿಳೂರು, ಕಿರಣ ಮರಾಠಿ ಯಲ್ಲಾಪುರ ಅಧ್ಯಕ್ಷ ಭೀಮಶಿ ವಾಲ್ಮಕಿ, ಮುಂಡಗೋಡ ಅಧ್ಯಕ್ಷ ಶಿವಾನಂದ ಜೋಗಿ, ಹರಿಹರ ನಾಯ್ಕ ಓಂಕಾರ್, ಸೀತರಾಮ ಗೌಡ ಹುಕ್ಕಳ್ಳಿ, ಈರಾ ಗೌಡ ನಿಲ್ಕುಂದ, ಸೀತರಾಮ ನಾಯ್ಕ ಕುಂದರಗಿ, ಅನಂತಗೌಡ ಮಾವಿನಮನೆ, ಭಾಸ್ಕರ ಗೌಡ, ಚಂದ್ರು ಪೂಜಾರಿ ಮಂಚಿಕೇರಿ, ಎಮ್ ಆರ್ ನಾಯ್ಕ, ರಾಜು ನರೇಬೈಲ್, ರಮೇಶ ಮರಾಠಿ, ಸ್ವಾತಿ ಜೈನ್, ಯಶೋಧಾ ನೌಟುರು ಒಟ್ಟಾಗಿ ಆಕ್ಷೇಪಣೆ ಸಲ್ಲಿಸಿದರು




