ಬೈಕಿಗೆ ಪೆಟ್ರೋಲ್ ಹಾಕಿಸುವ ವಿಷಯವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ವ್ಯಕ್ತಿಯೊಬ್ಬ ತನ್ನನ್ನು ತಾನು `ಡಾನ್’ ಎಂದು ಪರಿಚಯಿಸಿಕೊಂಡಿದ್ದಾನೆ. ಆ ಡಾನ್’ನಿಂದ ಸ್ಕೂಟರ್ ಸವಾರರಿಬ್ಬರ ಮೇಲೆ ದಬ್ಬಾಳಿಕೆ ನಡೆದಿದೆ.
ಜನವರಿ 16ರಂದು ಯಲ್ಲಾಪುರದ ಹೊಸಳ್ಳಿ ಗ್ರಾಮದ ಪೆಟ್ರೋಲ್ ಬಂಕಿನಲ್ಲಿ ಈ ಗಲಾಟೆ ನಡೆದಿದೆ. ಆ ದಿನದ ಗಲಾಟೆಗೆ ಸಂಬ0ಧಿಸಿ ಮಂಜುನಾಥ ಹೊನ್ನಳ್ಳಿ ಎಂಬಾತರು ಒಂದು ದೂರು ನೀಡಿದ್ದು, ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ.
ಧಾರವಾಡದ ಗಣೇಶ ನಾಯ್ಕ (27) ಎಂಬಾತರು ಆ ದಿನ ತಮ್ಮ ಸ್ಕೂಟರಿಗೆ ಪೆಟ್ರೋಲ್ ಹಾಕಿಸಲು ಪಾಳಿಯಲ್ಲಿ ನಿಂತಿದ್ದರು. ಆಗ, ಅವರ ಹಿಂದೆ ಬಂದ ಬೈಕ್ ಸವಾರ `ತನಗೆ ಮೊದಲು ಪೆಟ್ರೋಲ್ ಹಾಕಬೇಕು’ ಎಂದು ಸೂಚಿಸಿದರು. ಅದಕ್ಕಾಗಿ ಗಣೇಶ ನಾಯ್ಕ ಅವರು ತಮ್ಮ ಸ್ಕೂಟರನ್ನು ಕೊಂಚ ಮುಂದೆ ತೆಗೆದುಕೊಂಡು ಹೋದರು. ಈ ವೇಳೆ ಸ್ಕೂಟರ್ ಹಿಂದೆ ಕೂತಿದ್ದ ಸದ್ದಾಂ ಹುಸೇನ್ ಅವರ ಕಾಲು ಹಿಂದಿದ್ದ ಬೈಕಿಗೆ ತಾಗಿತು.
ಪರಿಣಾಮ ಸಿಟ್ಟಾದ ಬೈಕ್ ಸವಾರ `ನನ್ನ ಬೈಕನ್ನು ಮೆಟ್ಟುತ್ತಿಯಾ?’ ಎಂದು ಪ್ರಶ್ನಿಸಿ ಸದ್ದಾಂ ಹುಸೇನ್ ಮೇಲೆ ಕೈ ಮಾಡಿದರು. ತಪ್ಪಿಸಲು ಹೊರಟ ಗಣೇಶ ನಾಯ್ಕ ಅವರಿಗೂ ಪೆಟ್ಟು ಬಿದ್ದಿತು. ಹೊಡೆಯುತ್ತಿದ್ದ ವ್ಯಕ್ತಿ `ನಾನು ಯಾರು ಎಂದು ತಿಳಿದಿದ್ದೀಯಾ? ನಾನು ಲೋಕಲ್ ಡಾನ್’ ಎಂದು ಹೇಳುತ್ತಿದ್ದರು. ಗಣೇಶ ನಾಯ್ಕ ಹಾಗೂ ಸದ್ದಾಂ ಹುಸೇನ್ ಮರು ಮಾತನಾಡಿದಾಗ `ನನಗೆ ಎದುರು ಉತ್ತರ ಕೊಡುತ್ತೀಯಾ?’ ಎಂದು ಪ್ರಶ್ನೆ ಮಾಡಿ ಮತ್ತೆ ಹೊಡೆಯಲು ಶುರು ಮಾಡಿದ್ದರು.
ಈ ವೇಳೆ ಅಲ್ಲಿದ್ದ ಸ್ಥಳೀಯರು ಹೊಡೆದಾಟ ಬಿಡಿಸಿದ್ದು, ಗಾಯಗೊಂಡ ಗಣೇಶ ನಾಯ್ಕ ಧಾರವಾಡ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದು ಚೇತರಿಸಿಕೊಂಡ ತರುವಾಯ ಯಲ್ಲಾಪುರಕ್ಕೆ ಮರಳಿ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ಆ ದಿನ ಹೊಡೆದಾಟ ನಡೆಸಿದ ಡಾನ್ ಯಾರು? ಎಂದು ಪೊಲೀಸರು ಹುಡುಕಾಟ ನಡೆಸಿದ್ದಾರೆ.




