15 ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಚೇತನ ದೇವಳಿ ಅರಣ್ಯ ಪ್ರದೇಶದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಯಲ್ಲಾಪುರ ತಾಲೂಕಿನ ತೆಲಂಗಾರಿನ ಸರಳಗುಡ್ಡೆಯಲ್ಲಿ ಚೇತನ ದೇವಳಿ (29) ತಮ್ಮ ತಂದೆ-ತಾಯಿ ಜೊತೆ ವಾಸಿಸುತ್ತಿದ್ದರು. ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ಅವರಿಗೆ ಮದ್ಯ ವ್ಯಸನದ ಚಟ ಅಂಟಿಕೊAಡಿತ್ತು. ಈಚೆಗೆ ವಿಪರೀತ ಪ್ರಮಾಣದಲ್ಲಿ ಅವರು ಸರಾಯಿ ಸೇವಿಸುತ್ತಿದ್ದರು. ಇದೇ ವಿಷಯವಾಗಿ ಮನೆಯಲ್ಲಿ ವಾಗ್ವಾದ ನಡೆದಿತ್ತು.
ಜನವರಿ 8ರಂದು ಮದ್ಯ ಸೇವನೆ ವಿಷಯವಾಗಿ ಚೇತನ ದೇವಳಿ ಮನೆಯಲ್ಲಿ ಜಗಳ ಶುರುವಾಯಿತು. `ಕುಡಿಯಬೇಡ’ ಎಂದು ಅವರ ತಂದೆ-ತಾಯಿ ಬುದ್ದಿ ಹೇಳಿದ್ದರು. ಆಗ, ಪಾಲಕರಿಗೆ ನಿಂದಿಸಿ ಮನೆಬಿಟ್ಟು ಹೋದ ಚೇತನ್ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. 15 ದಿನ ಕಳೆದರೂ ಚೇತನ್ ದೇವಳಿ ಮನೆಗೆ ಮರಳದಿದ್ದಾಗ ಹುಡುಕಾಟ ಶುರುವಾಯಿತು.
ಜನವರಿ 22ರಂದು ತೆಲಂಗಾರಿನ ಸರಳಗುಡ್ಡೆಯ ಗುಡ್ಡೆ ಮೇಲಿನ ಅರಣ್ಯ ಪ್ರದೇಶದಲ್ಲಿ ಚೇತನ ದೇವಳಿ ಶವವಾಗಿದ್ದರು. ಐದಾರು ದಿನಗಳ ಹಿಂದೆಯೇ ಅವರು ಅಲ್ಲಿನ ಹೊನಗಲು ಮರಕ್ಕೆ ನೇಣು ಹಾಕಿಕೊಂಡಿದ್ದರು. ಅವರ ಶವ ಕೊಳೆತ ಸ್ಥಿತಿಯಲ್ಲಿದ್ದು, ಪಾಲಕರು ಬಂದು ಮಗನನ್ನು ಗುರುತಿಸಿದರು.
ತಮ್ಮನ ಸಾವಿನ ಬಗ್ಗೆ ಕಣ್ಣಿಗೇರಿಯ ಚಿಪ್ಪನಗದ್ದೆಯಲ್ಲಿ ವಾಸವಾಗಿರುವ ಭಾರತಿ ಮರಾಠಿ ಅವರು ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.




