ತಾಳಗುಪ್ಪಾದಿಂದ ಶಿರಸಿ ಮಾರ್ಗವಾಗಿ ಹುಬ್ಬಳ್ಳಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಯೋಜನೆ ಕೇಂದ್ರ ಸರ್ಕಾರದ ಮುಂದಿದ್ದು, ಈ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಖಾಸಗಿ ಕಂಪನಿಗೆ ಸರ್ಕಾರ ಗುತ್ತಿಗೆವಹಿಸಿದೆ.
ತಾಳಗುಪ್ಪ ಶಿರಸಿ ಹುಬ್ಬಳ್ಳಿ ಯೋಜನೆಯ ಅಂತಿಮ ಸ್ಥಳ ಸಮೀಕ್ಷೆ ನಡೆಸುವಂತೆ ಗುತ್ತಿಗೆ ಒಪ್ಪಂದದಲ್ಲಿ ಸೂಚಿಸಲಾಗಿದೆ. ಈ ಬಗ್ಗೆ ವಿಸ್ತಾರವಾದ ವರದಿ ನೀಡಲು ನೈರುತ್ಯ ರೈಲ್ವೆ ಇಲಾಖೆ ಹೈದ್ರಾಬಾದ್ ಮೂಲದ ಕಂಪನಿಗೆ ಆದೇಶ ನೀಡಿದೆ. ಜನವರಿ 16ರಂದು ಈ ಗುತ್ತಿಗೆ AARVEE ASSOCIATES ARCHITECTS ENGINEERS AND CONSULTANTS PRIVATE LIMITED ಕಂಪನಿಗೆ ಸಿಕ್ಕಿದೆ. ಒಂದು ವರ್ಷದ ಒಳಗೆ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ವರದಿ ಒಪ್ಪಿಸುವಂತೆ ಷರತ್ತು ವಿಧಿಸಲಾಗಿದೆ.
ಈ ಯೋಜನೆಗಾಗಿ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಯತ್ನ ನಡೆಸುತ್ತಿದ್ದು, 2024ರ ಮಾರ್ಚ 14ರಂದು 3.95 ಕೋಟಿ ರೂ ಮಂಜೂರು ಮಾಡಿಸಿದ್ದರು. 2024ರ ಡಿಸೆಂಬರ್ 8ರಂದು ಸಹ ಹುಬ್ಬಳ್ಳಿಯ ನೈರುತ್ಯ ವಲಯ ರೈಲ್ವೇ ಭವನದಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಅವರನ್ನು ಈ ಬಗ್ಗೆ ಒತ್ತಾಯಿಸಿದ್ದರು.
ಅಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಡಿದ ಒತ್ತಾಯಕ್ಕೆ ಮಣಿದ ಸೋಮಣ್ಣ ಅವರು ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿ, ಆ ಕೆಲಸವನ್ನು ಮುಂದುವರೆಸಿದ್ದಾರೆ.





