ನಾಲ್ಕು ತಿಂಗಳಿನಿoದ ತಲೆಸುತ್ತುವಿಕೆಯಿಂದ ಬಳಲುತ್ತಿದ್ದ ಆಶಾಬಿ ಕರೆಡಳ್ಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮುಂಡಗೋಡಿನ ಹೀರೆಹಳ್ಳಿಯಲ್ಲಿ ಆಶಾಬಿ ಕರೆಡಳ್ಳಿ (38) ವಾಸವಾಗಿದ್ದರು. `ತನಗೆ ಆಗದವರ ಗಾಳಿ ಮಾಡಿಸಿದ್ದಾರೆ’ ಎಂದು ಆಶಾಬಿ ಕೊರಗುತ್ತಿದ್ದರು. ಇದೇ ಕಾರಣದಿಂದ ಅವರು ಮಾನಸಿಕವಾಗಿ ನೊಂದಿದ್ದರು.
ಅತಿಯಾದ ತಲೆಸುತ್ತಿನಿಂದ ಜೀವನದ ಬಗ್ಗೆ ಜಿಗುಪ್ಸೆ ಹೊಂದಿದ ಅವರನ್ನು ಕುಟುಂಬದವರು ಸಮಾಧಾನ ಮಾಡಿದ್ದರು. ಜನವರಿ 22ರ ರಾತ್ರಿ 10 ಗಂಟೆಗೆ ಮಲಗಿದ್ದ ಅವರು ಜನವರಿ 23ರ ನಸುಕಿನ 2.30ರ ಆಸುಪಾಸಿನಲ್ಲಿ ನಿದ್ರೆಯಿಂದ ಎದ್ದರು.
ಅದಾದ ನಂತರ ಮನೆ ಕೋಣೆಯ ಅಟ್ಟಲಕ್ಕೆ ಹಾಕಿದ ಎಳೆಗೆ ನೇಣು ಬಿಗಿದುಕೊಂಡು ಸಾವನಪ್ಪಿದರು. `ಈ ಮರಣದಲ್ಲಿ ಯಾವುದೇ ಸಂಶಯವಿಲ್ಲ. ಅದಾಗಿಯೂ ಸೂಕ್ತ ತನಿಖೆ ನಡೆಸಬೇಕು’ ಎಂದು ಆಶಾಬಿ ಕರೆಡಳ್ಳಿ ಅವರ ತಂದೆ ನನ್ನೆಸಾಬ್ ಪಠಾಣ್ ಪೊಲೀಸ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಸ್ಪತ್ರೆಯಲ್ಲಿದ್ದ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.





