ಯಲ್ಲಾಪುರ ಪಟ್ಟಣದಿಂದ 28ಕಿಮೀ ದೂರವಿರುವ ಈರಾಪುರಕ್ಕೆ ನಿತ್ಯವೂ ಮೂರು ಬಾರಿ ಕೆಎಸ್ಆರ್ಟಿಸಿ ಬಸ್ ಸಂಪರ್ಕ ಕಲ್ಪಿಸಿದೆ. ಇದರಿಂದ ಶಾಲಾ ಮಕ್ಕಳು ಹಾಗೂ ಶಕ್ತಿ ಯೋಜನೆ ಫಲಾನುಭವಿಗಳಿಗೆ ಸಾಕಷ್ಟು ಅನುಕೂಲವಾಗಿದ್ದು, ನಿಗಮದ ಮೇಲಿನ ಅಭಿಮಾನದಿಂದಾಗಿ ಊರಿನವರು ಚಾಲಕ-ನಿರ್ವಾಹಕರಿಗೆ ಹೊಸ ಬಟ್ಟೆ ನೀಡಿ ಗೌರವಿಸಿದ್ದಾರೆ.
ಕಳೆದ 10 ವರ್ಷಗಳಿಂದ ಕೆಎಸ್ಆರ್ಟಿಸಿ ಈರಾಪುರ ಗ್ರಾಮಕ್ಕೆ ಬಸ್ ಸೇವೆ ಒದಗಿಸುತ್ತಿದೆ. ಸಾರಿಗೆ ಸಿಬ್ಬಂದಿ ಸಹ ಅತ್ಯಂತ ಸೌಜನ್ಯದಿಂದ ಜನರ ಜೊತೆ ಬೆರೆತಿದ್ದಾರೆ. ಈ ಹಿನ್ನಲೆ ಕಳೆದ ನಾಲ್ಕು ವರ್ಷಗಳಿಂದ ಚಾಲಕರ ದಿನದ ಅವಧಿಯಲ್ಲಿ ಊರಿನವರು ಚಾಲಕ ಹಾಗೂ ನಿರ್ವಾಹಕರಿಗೆ ಗೌರವಿಸುತ್ತ ಬಂದಿದ್ದಾರೆ. ಜನವರಿ 24ರ ಈ ದಿನ ನಿಗಮವೂ ಚಾಲಕರ ದಿನ ಆಚರಿಸುತ್ತಿದ್ದು, ಈ ಹಿನ್ನಲೆ ಈರಾಪುರದ ಜನ ನಿಗಮದ ಮೇಲಿನ ಅಭಿಮಾನದಿಂದ ಸಾರಿಗೆ ಸಿಬ್ಬಂದಿಯನ್ನು ಗೌರವಿಸಿದರು.
`ಈರಾಪುರ ಗ್ರಾಮಕ್ಕೆ ಸರ್ಕಾರ ಬಸ್ ವ್ಯವಸ್ಥೆ ಕಲ್ಪಿಸಿದ್ದರಿಂದ ಸಾಕಷ್ಟು ಜನರಿಗೆ ಅನುಕೂಲವಾಗಿದೆ. ಗ್ರಾಮೀಣ ಸಾರಿಗೆ ವ್ಯವಸ್ಥೆಯಿಂದ ಪ್ರಯಾಣಿಕರ ಓಡಾಟದ ಜೊತೆ ಶೈಕ್ಷಣಿಕ ಅಭಿವೃದ್ಧಿ ಸಹ ಸಾಧ್ಯವಾಗಿದೆ’ ಎಂದು ಊರಿನ ಪ್ರಮುಖರಾದ ಪ್ರಸನ್ನ ಹೆಗಡೆ ಅಭಿಪ್ರಾಯಪಟ್ಟರು. `ರಾತ್ರಿ ವೇಳೆ ಈರಾಪುರದಲ್ಲಿ ತಂಗುವ ಬಸ್ಸು ಬೆಳಗ್ಗೆ ಪ್ರಯಾಣಿಕರನ್ನು ಪೇಟೆಗೆ ಕರೆದೊಯ್ಯುತ್ತದೆ. ಮಧ್ಯಾಹ್ನ ಮರಳಿ ಅವರನ್ನು ಸುರಕ್ಷಿತವಾಗಿ ಊರಿಗೆ ತಲುಪಿಸುತ್ತದೆ. ಗ್ರಾಮೀಣ ಅಭಿವೃದ್ಧಿಯಲ್ಲಿ ಸಾರಿಗೆ ಸಂಸ್ಥೆಯ ಕೊಡುಗೆ ಅಪಾರ’ ಎಂದು ಅಂಜಲಿ ದೇವಳಿ ಅನಿಸಿಕೆ ಹಂಚಿಕೊoಡರು.
ಚಾಲಕ ಜಿ ಗಲಗಲಿ ಹಾಗೂ ನಿರ್ವಾಹಕ ಪಿ ಎಸ್ ಗೋರವನಕೊಳ್ಳ ಗ್ರಾಮಸ್ಥರ ಪ್ರೀತಿಗೆ ಶರಣಾದರು. ಪ್ರಮುಖರಾದ ಮಹಾಬಲೇಶ್ವರ ಭಟ್ಟ, ಗಜಾನನ ಭಟ್ಟ, ಶ್ರೀಕೃಷ್ಣ ಭಟ್ಟ, ಶ್ರೀಧರ ಭಟ್ಟ ಇತರರು ಹಾಜರಿದ್ದರು.




