ಕಲೆ, ಸಂಸ್ಕೃತಿ, ಪರಂಪರೆಯ ಆರಾಧನಾ ಕೇಂದ್ರವಾದ ಅಂಕೋಲಾದ ಹಿಚ್ಕಡದ ಭಜನಾ ಮಂಡಳಿ, ಸಾಂಸ್ಕೃತಿಕ ಒಕ್ಕೂಟದವರು ಒಗ್ಗಟ್ಟಿನಿಂದ ಯಕ್ಷಗಾನ ಆಯೋಜಿಸುತ್ತ ಬಂದಿದ್ದಾರೆ. ಈ ಯಕ್ಷ ಸಂಘಟನೆಗೆ ಇದೀಗ 50ರ ಸಡಗರ!
ಈ ಹಿನ್ನಲೆ ಜನವರಿ 24ರಿಂದ 26ರವರೆಗೆ ಹಿಚ್ಕಡ ರಂಗಂಮಂದಿರದಲ್ಲಿ ವಿವಿಧ ಯಕ್ಷಗಾನ ಪ್ರದರ್ಶನ ಹಾಗೂ ಕಲಾವಿದರಿಗೆ ಸನ್ಮಾನ ನಡೆಯುತ್ತಿದೆ. ಪ್ರತಿ ವರ್ಷ ಗಣರಾಜ್ಯೋತ್ಸವ ದಿನ ಇಲ್ಲಿನ ಬಸ್ ನಿಲ್ದಾಣದ ಬಳಿ ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದು, ಈ ಬಾರಿ ಮೂರು ದಿನಗಳ ಕಾಲ ಬಗೆ ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹಿಚ್ಕಡ ಗ್ರಾಮದಲ್ಲಿ 50 ವರ್ಷಗಳಿಂದ ನಡೆಯುತ್ತಿರುವ ವಾರ್ಷಿಕ ಯಕ್ಷಗಾನ ಪ್ರದರ್ಶನ ಮಾದರಿ ಎನಿಸಿದೆ.
ಕರಾವಳಿಯ ಗಂಡು ಕಲೆ ಎಂದು ಕರೆಸಿಕೊಳ್ಳುವ ಯಕ್ಷಗಾನದ ಪ್ರದರ್ಶನವು 90ರ ದಶಕದಿಂದ ಆಚೆಗೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಗಟ್ಟಿಗೊಂಡಿತ್ತು. ದೃಶ್ಯ ಮತ್ತು ಶ್ರವಣ ಮಾಧ್ಯಮದ ಮೂಲಕ ಮನೋರಂಜನೆ, ಐತಿಹಾಸಿಕ ಮತ್ತು ಪೌರಾಣಿಕ ವಿಷಯದ ವಸ್ತುಗಳನ್ನು ಸುಲಭವಾಗಿ ಜನರಿಗೆ ತಲುಪಿಸಲು ಮತ್ತು ಸಾಂಘಿಕ ಭಾವನೆ ಪ್ರಚೋದನೆಗೊಳಿಸಲು ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ತಾಲೂಕಿನಲ್ಲಿ ಯಕ್ಷಗಾನದ ಪ್ರದರ್ಶನ ಯಥೇಚ್ಛವಾಗಿ ನಡೆದುಕೊಂಡು ಬರುತ್ತಿತ್ತು. ಕಳೆದ ಎರಡು ದಶಕದಿಂದ ನಡೆದ ಮಾಹಿತಿ ತಂತ್ರಜ್ಞಾನ ಕ್ರಾಂತಿ ಮತ್ತು ವಿದ್ಯುನ್ಮಾನ ದೃಶ್ಯ ಮಾಧ್ಯಮಗಳ ಮೂಲಕ ಸಾಂಪ್ರದಾಯಿಕ ಕಲೆಗಳು ಮೂಲೆಗುಂಪಾದರೂ ಅಂಕೋಲಾ ಭಾಗದಲ್ಲಿ ಯಕ್ಷಗಾನ ಗಟ್ಟಿಯಾಗಿ ನೆಲೆಯೂರಿತ್ತು. ಇದಕ್ಕೆ ಭಜನಾ ಮಂಡಳಿ, ಸಾಂಸ್ಕೃತಿಕ ಒಕ್ಕೂಟ ಮತ್ತಿತರ ಸಂಘಟನೆಗಳ ಕೊಡುಗೆಯೂ ಅಪಾರ.
ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಖ್ಯಾತ ಯಕ್ಷಗಾನ ಪಟುಗಳು ಇಲ್ಲಿ ತಾಳಕ್ಕೆ ಹೆಜ್ಜೆ ಹಾಕಿದ್ದಾರೆ. ನಾಡವ, ಮೀನುಗಾರ, ನಾಮಧಾರಿ ಮತ್ತು ಪರಿಶಿಷ್ಟ ಸಮುದಾಯದ ಜನರು ಇರುವ ಈ ಗ್ರಾಮದಲ್ಲಿ ದೊಟ್ಟಮಟ್ಟದಲ್ಲಿಯೇ ಯಕ್ಷ ಆರಾಧನೆ ನಡೆಯುತ್ತಿದೆ. ಪರಿಶಿಷ್ಟ ಸಮುದಾಯದ ಸಾಂಪ್ರದಾಯಿಕ ಭಜನಾ ಮಂಡಳಿಯ ಅಂಗವಾಗಿ ಈ ಹಿಂದೆ ಪ್ರತ್ಯೇಕವಾದ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗುತ್ತಿತ್ತು. ಗ್ರಾಮದ ಧಾರ್ಮಿಕ ಕಾರ್ಯಗಳಲ್ಲಿ ಎಲ್ಲ ಸಮುದಾಯದವರು ಒಂದಾಗಿ ಭಾಗಿಯಾಗುವುದರಿಂದ ಯಕ್ಷಗಾನದಲ್ಲಿಯೂ ಪ್ರತ್ಯೇಕತೆ ಬೇಡ ಎಂದು ಗ್ರಾಮದ ಹಿರಿಯರು ನಿರ್ಣಯಿಸಿ ಇದೀಗ ನಾಡವ ಸಮುದಾಯದ ಮುಂದಾಳತ್ವದಲ್ಲಿ ಪರಿಶಿಷ್ಟ ಸಮುದಾಯದ ಭಜನಾ ಮಂಡಳಿಯ ಅಂಗವಾಗಿ ಒಗ್ಗಟ್ಟಿನ ಯಕ್ಷಗಾನ ಪ್ರದರ್ಶನ ನಡೆಯುತ್ತಿದೆ.
ಇಲ್ಲಿನ ಯಕ್ಷಗಾನ ಪ್ರದರ್ಶನಕ್ಕೆ 50 ವರ್ಷ ತುಂಬಿದ ಹಿನ್ನೆಲೆ ಈ ವರ್ಷ ಜನವರಿ 24 ರಿಂದ ನಿರಂತರವಾಗಿ ಮೂರು ದಿನ ಯಕ್ಷಗಾನ ಉತ್ಸವ ಆಯೋಜಿಸಲಾಗಿದೆ. ಜನವರಿ 24ರಂದು ಪಾಂಚಜನ್ಯ, ಜ 25ರಂದು ಭಸ್ಮಾಸುರ ಮೋಹಿನಿ ಮತ್ತು ಜ 26ರಂದು ಭೀಷ್ಮಾರ್ಜುನ ಎಂಬ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ. ಜನವರಿ 26ರಂದು 50 ವರ್ಷಗಳಿಂದ ಇದೇ ವೇದಿಕೆಯಲ್ಲಿ ಯಕ್ಷಗಾನ ಪ್ರದರ್ಶಿಸಿದ 35ಕ್ಕೂ ಹಿರಿಯ ಕಲಾವಿದರಿಗೆ ಸನ್ಮಾನವನ್ನು ಆಯೋಜಿಸಲಾಗಿದೆ.
‘ಹಿಚ್ಕಡ ಗ್ರಾಮ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹಲವು ಹೋರಾಟಗಾರರಿಗೆ ಸ್ಪೂರ್ತಿ ಮತ್ತು ಆಶ್ರಯ ನೀಡಿತ್ತು. ಪರಂಪರಾಗತವಾಗಿ ಇಲ್ಲಿನ ಧಾರ್ಮಿಕ ಕಾರ್ಯಗಳು ಯಾವುದೇ ಅಡೆತಡೆ ಇಲ್ಲದೆ ನಡೆದುಕೊಂಡು ಬಂದಿದೆ. ಗಣರಾಜ್ಯೋತ್ಸವದ ಅಂಗವಾಗಿ ಪ್ರತಿ ವರ್ಷವೂ ಹಿರಿಯರ ನೇತೃತ್ವದಲ್ಲಿ ಯಕ್ಷಗಾನ ಪ್ರದರ್ಶನ ಆಯೋಜನೆ ಮಾಡುತ್ತಿದ್ದೇವೆ. ಪೌರಾಣಿಕ ಐತಿಹಾಸಿಕ ಮತ್ತು ಸಾಮಾಜಿಕ ಕಳಕಳಿಯ ಸಂದೇಶವನ್ನು ಸಾರುವ ಯಕ್ಷಗಾನವನ್ನು ಪ್ರದರ್ಶಿಸಲಾಗುತ್ತಿದ್ದು, ಖ್ಯಾತ ಯಕ್ಷ ದಿಗ್ಗಜರು ಈ ವೇದಿಕೆಯಲ್ಲಿ ಪ್ರದರ್ಶನ ನೀಡಿದ್ದಾರೆ’ ಎಂದು ಗ್ರಾಮದ ಉಪನ್ಯಾಸಕರೊಬ್ಬರು ತಿಳಿಸಿದರು.





