ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 10 ತಿಂಗಳ ಅವಧಿಯಲ್ಲಿ ಅಕ್ರಮ ಮರಳು ಸಾಗಾಣಿಕೆ, ದಾಸ್ತಾನು ಹಾಗೂ ಗಣಿಗಾರಿಕೆ ನಡೆಸಿದವರನ್ನು ಪತ್ತೆ ಮಾಡಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ 63.53 ಲಕ್ಷ ರೂ ದಂಡ ವಿಧಿಸಿದೆ. ಅಕ್ರಮ ನಡೆಸುವವರ ವಿರುದ್ಧ 205 ಪ್ರಕರಣಗಳನ್ನು ದಾಖಲಿಸಿದೆ. ಅದಾಗಿಯೂ ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜಾರೋಷವಾಗಿ ಅಕ್ರಮ ಮರಳುಗಾರಿಕೆ ಮುಂದುವರೆದಿದೆ. ಪ್ರಭಾವಿಗಳ ವಿರುದ್ಧ ಕ್ರಮ ಜರುಗಿಸದೇ ಗಣಿ ಇಲಾಖೆ ಮೌನವಾಗಿದೆ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಮರಳು ತೆಗೆಯುವಿಕೆ, ಮರಳು ಸಾಗಾಟ ಹಾಗೂ ಮರಳು ದಾಸ್ತಾನಿಗೆ ಅನುಮತಿ ಸಿಕ್ಕಿಲ್ಲ. ಅದಾಗಿಯೂ ಪ್ರತಿ ದಿನ ರಾತ್ರಿ ವೇಳೆ ರಾಜಾರೋಷವಾಗಿ ಮರಳು ಲಾರಿಗಳು ಸಂಚರಿಸುತ್ತಿದೆ. ಅಕ್ರಮ ಮರಳುಗಾರಿಕೆ ಬಗ್ಗೆ ದೂರು ನೀಡಿದವರ ಮೇಲೆ ಕುಮಟಾದಲ್ಲಿ ಹಲ್ಲೆ ನಡೆದಿದ್ದು, ತಪಾಸಣೆಗೆ ತೆರಳಿದ್ದ ಸರ್ಕಾರಿ ಭೂ ವಿಜ್ಞಾನಿಗಳ ದಿಗ್ಬಂಧನ ನಡೆದ ಬಗ್ಗೆ ಪೊಲೀಸ್ ಪ್ರಕರಣವೂ ದಾಖಲಾಗಿದೆ. ಹೀಗಾಗಿ ಗಣಿ ಇಲಾಖೆ ಅಧಿಕಾರಿಗಳು ಸಹ `ಊರ ಉಸಾಬರಿ ನಮಗೇತಕೆ?’ ಎಂದು ಮೌನವಾಗಿದ್ದಾರೆ.
ಕಳ್ಳರ ಶ್ರಮ ಸರ್ಕಾರದ ಪಾಲು!
ಈ ಸಾಲಿನಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಮಾಡಿರುವ 9 ಪ್ರಕರಣಗಳನ್ನು ಮಾತ್ರ ಗಣಿ ಇಲಾಖೆಯವರು ಪತ್ತೆ ಮಾಡಿದ್ದಾರೆ. ಅಲ್ಲಿ ಅಂದಾಜು 529 ಮೆಟ್ರಿಕ್ ಟನ್ ಮರಳನ್ನು ವಶಕ್ಕೆ ಪಡೆದಿದ್ದಾರೆ. ಹೀಗೆ ವಶಕ್ಕೆ ಪಡೆದ ಮರಳನ್ನು ಸರ್ಕಾರಿ ಕೆಲಸಗಳಿಗಾಗಿ ಅಧಿಕಾರಿಗಳು ಬಿಟ್ಟು ಕೊಟ್ಟಿದ್ದಾರೆ!
ಯಾರಿಗೆ ಎಷ್ಟು ಪಾಲು?
ಇನ್ನೂ ಜಿಲ್ಲೆಯಾದ್ಯಂತ ನಡೆಯುವ ಅನಧಿಕೃತ ಉಪ ಖನಿಜ ಗಣಿಗಾರಿಕೆ, ಸಾಗಾಣಿಕೆ, ದಾಸ್ತಾನು ಚಟುವಟಿಕೆ ತಡೆಗಟ್ಟಲು ತಂಡ ರಚಿಸಲಾಗಿದೆ. ಆದರೆ, ಆ ತಂಡವರು ಯಾವುದೇ ಕೆಲಸ ಮಾಡುತ್ತಿಲ್ಲ. ಅರಣ್ಯ, ಪೊಲೀಸ್, ಕಂದಾಯದ ಜೊತೆ ಗ್ರಾಮ ಪಂಚಾಯತ ಮಟ್ಟದಲ್ಲಿಯೂ ಅಕ್ರಮ ಮರಳುಗಾರಿಕೆ ನಡೆಸುವವರು `ಅಧಿಕಾರಿಗಳಿಗೆ ಕಾಸು ಕೊಟ್ಟು ಬಂದಿದ್ದೇವೆ’ ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. `ಆ ಶಾಸಕರಿಗೆ ಅಷ್ಟು ಕೊಡಬೇಕು. ಈ ಸಚಿವರಿಗೆ ಇಷ್ಟು ಕೊಡಬೇಕು. ಪ್ರತಿ ಪೊಲೀಸ್ ಠಾಣೆಗೆ ಇಷ್ಟು.. ಆ ಅಧಿಕಾರಿಗೆ ಅಷ್ಟು’ ಎಂದು ಅಲ್ಲಿ ಇಲ್ಲಿ ಕೊಡುವ ಕಾಸಿಗಿಂತ ಅಧಿಕ ಪ್ರಮಾಣದಲ್ಲಿ ಹೇಳಿಕೊಂಡು ಆ ಹಣವನ್ನು ಜನರಿಂದ ವಸೂಲಿ ಮಾಡುತ್ತಿದ್ದಾರೆ.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸ್ ನೀಡುವಿಕೆ ಹಾಗೂ ನಿಯಂತ್ರಣ ಪ್ರಾಧಿಕಾರ ಸಮಿತಿ ಸಭೆ ನಡೆಯಿತು
ಕಟ್ಟುನಿಟ್ಟಿನ ಸೂಚನೆ ನೀಡಿದ ಜಿಲ್ಲಾಧಿಕಾರಿ
`ಉತ್ತರ ಕನ್ನಡ ಜಿಲ್ಲೆಯಲ್ಲಿ ಕಲ್ಲು ಕ್ರಷರ್ಗಳಿಗೆ ಅನುಮತಿ ನೀಡುವ ಮುನ್ನ ಕ್ರಷರ್ ಅಧಿನಿಯಮದಲ್ಲಿನ ಸರ್ಷಕಿತ ವಲಯ ಕುರಿತಂತೆ ರೂಪಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನ ಅಧಿಕಾರಿ ಆಶಾ ಅವರಿಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಸೂಚಿಸಿದರು.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಕಲ್ಲು ಪುಡಿ ಮಾಡುವ ಘಟಕಗಳ ಲೈಸೆನ್ಸ್ ನೀಡುವಿಕೆ ಹಾಗೂ ನಿಯಂತ್ರಣ ಪ್ರಾಧಿಕಾರ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು `ಕಲ್ಲು ಕ್ರಶರ್ಗಳು ರಾಷ್ಟಿಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯಿಂದ ನಿಗಧಿಪಡಿಸಿದ ಅಂತರದಲ್ಲಿ ಇರಬೇಕು. ಜಿಲ್ಲಾ ರಸ್ತೆಯಿಂದ ಮತ್ತು ಇತರೆ ರಸ್ತೆಯಿಂದ, ಕಂದಾಯ ಗ್ರಾಮ, ದೇವಸ್ಥಾನ, ಶಾಲೆಯಿಂದ ನಿಗಧಿತ ದೂರದಲ್ಲಿರುವುದರ ಬಗ್ಗೆ ಸ್ಥಳ ಪರಿಶೀಲಿಸಬೇಕು. `ಕ್ರಷರ್ಗಳಿಂದ ಸಾರ್ವಜನಿಕರು ಮತ್ತು ಪರಿಸರಕ್ಕೆ ಯಾವುದೇ ತೊಂದರೆಯಾಗದoತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಅನುಮತಿಗಳನ್ನು ನೀಡಬೇಕು’ ಎಂದು ಸೂಚಿಸಿದರು.





