ನಾಲ್ಕು ವರ್ಷದ ಹಿಂದೆ ದೇವಾಲಯಕ್ಕೆ ನುಗ್ಗಿ ಅಲ್ಲಿನ ಕಾಸು ಕದ್ದು ತಲೆಮರೆಸಿಕೊಂಡಿದ್ದ ವ್ಯಕ್ತಿ ಇದೀಗ ಸಿಕ್ಕಿ ಬಿದ್ದಿದ್ದಾನೆ. ಗೋಕರ್ಣದಲ್ಲಿ ಕಳ್ಳತನ ಮಾಡಿದ್ದ ಆತ ಯಲ್ಲಾಪುರದಲ್ಲಿ ಕೂಲಿ ಕೆಲಸ ಮಾಡಿ ಸಭ್ಯನಂತೆ ಬದುಕು ಕಟ್ಟಿಕೊಂಡಿದ್ದ. ಪೊಲೀಸರು ಉಪಾಯವಾಗಿ ಆತನನ್ನು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ!
2021ರಲ್ಲಿ ಗೋಕರ್ಣದ ಬಂಗ್ಲೆಗುಡ್ಡದ ಕೃಷ್ಣ ಗೌಂಡಿ ವೈತರಣಿ ವನದುರ್ಗಾರಿ ಪರಮೇಶ್ವರಿ ದೇವಾಲಯದಲ್ಲಿ ಕಳ್ಳತನ ಮಾಡಿದ್ದ. 20 ಸಾವಿರ ರೂ ಮೌಲ್ಯದ ವಸ್ತುಗಳ ಜೊತೆ ಹಣವನ್ನು ಆತ ಅಪಹರಿಸಿದ್ದ. ಆಗಿನ ಪಿಎಸ್ಐ ನವೀನ ನಾಯ್ಕ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಜಾಮೀನು ಪಡೆದ ಕೃಷ್ಣ ಗೌಂಡಿ ತಲೆಮರೆಸಿಕೊಂಡಿದ್ದ.
ಗೋಕರ್ಣದಿoದ ತಪ್ಪಿಸಿಕೊಂಡು ಯಲ್ಲಾಪುರಕ್ಕೆ ಬಂದ ಆತ ಇಲ್ಲಿನ ಇಡಗುಂದಿ ಬಳಿಯ ಭಟ್ಟರ ಮನೆಯಲ್ಲಿ ಆಶ್ರಯ ಪಡೆದಿದ್ದ. ವಾಗಳ್ಳಿಯ ಕಡೆಗೂ ಆತ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಕಳ್ಳತನ ಆರೋಪದ ಕಾರಣ ಆತ ನ್ಯಾಯಾಲಯಕ್ಕೆ ಹಾಜರಾಗಬೇಕಿದ್ದು, ಅಲ್ಲಿಯೂ ಹಾಜರಾಗದೇ ತಲೆಮರೆಸಿಕೊಂಡು ಓಡಾಡುತ್ತಿದ್ದ.
ಪೊಲೀಸರು ಸಾಕಷ್ಟು ಬಾರಿ ಆತನ ಹುಡುಕಾಟ ನಡೆಸಿದರೂ ಪತ್ತೆ ಆಗಿರಲಿಲ್ಲ. ಶುಕ್ರವಾರ ಗೋಕರ್ಣ ಪೊಲೀಸ್ ಠಾಣೆ ಸಿಬ್ಬಂದಿ ಶ್ರವಣಕುಮಾರ ಹಾಗೂ ಭಟ್ಕಳ ಪೊಲೀಸ್ ಠಾಣೆ ಸಿಬ್ಬಂದಿ ಉದಯ ನಾಯ್ಕ ಜೊತೆ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ನಾಗರಾಜ ನಾಯ್ಕ ಸೇರಿ ಕೃಷ್ಣ ಗೌಂಡಿ ಯಲ್ಲಾಪುರದಲ್ಲಿರುವುದನ್ನು ಪತ್ತೆ ಮಾಡಿದರು.
ಯಲ್ಲಾಪುರಕ್ಕೆ ಬಂದ ಪೊಲೀಸರು ಆತನನ್ನು ಗುರುತಿಸಿ ಪೊಲೀಸ್ ಠಾಣೆಗೆ ಕರೆದೊಯ್ದರು. ವೈದ್ಯಕೀಯ ಪರೀಕ್ಷೆ ಹಾಗೂ ಇನ್ನಿತರ ಕಾನೂನು ಶಾಸ್ತçಗಳನ್ನು ಪೂರೈಸಿ ನ್ಯಾಯಾಲಯಕ್ಕೆ ಒಪ್ಪಿಸಿದರು. ನ್ಯಾಯಾಲಯವೂ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.




