ಗೋಕರ್ಣ ಮುಖ್ಯ ಕಡಲತೀರದ ರಾಮಾ-ಸೀತಾ-ಲಕ್ಷ್ಮಣ ಮಂದಿರದಲ್ಲಿ ವಿದೇಶಿ ಬೆಡಗಿ ಹಾಗೂ ಹಿಮಾಚಲ ಪ್ರದೇಶ ಹುಡುಗ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದಿದ್ದಾರೆ. ಜಾತಿ, ಧರ್ಮ, ಪ್ರದೇಶದ ಹಂಗಿಲ್ಲದೇ ಅವರಿಬ್ಬರು ಕೂಡಿ ಬಾಳುವ ಶಪಥ ಮಾಡಿದ್ದಾರೆ.
ಹಿಮಾಚಲ ಪ್ರದೇಶದ ಸಂಜಾತ ಅವರು ಇಲ್ಲಿನ ರೆಸಾರ್ಟವೊಂದರಲ್ಲಿ ನೌಕರಿ ಮಾಡುತ್ತಾರೆ. ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಕ್ಲಾರಿಷ್ ರಿಚ್ ಅವರು ಸಂಜಾತನನ್ನು ಹುಡುಕಿಕೊಂಡು ಫ್ರೇಂಚ್ ದೇಶದಿಂದ ಭಾರತಕ್ಕೆ ಬರುತ್ತಾರೆ. ಆತನ ಮೋಹದಲ್ಲಿ ಬಿದ್ದು, ಪ್ರೀತಿಯನ್ನು ಮನ್ನಿಸಿ ಅವರಿಬ್ಬರು ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದಾರೆ.
`ಭಾರತೀಯ ಸಂಸ್ಕೃತಿ ಪ್ರಕಾರ ಮದುವೆ ಆಗೋಣ’ ಎಂದು ಸಂಜಾತ ಹೇಳಿದಾಗ ಇಲ್ಲಿನ ಆಚಾರ-ವಿಚಾರಗಳ ಬಗ್ಗೆ ಅರಿತ ಕ್ಲಾರಿಷ್ ರಿಚ್ ಅದನ್ನು ಗೌರವಿಸಿ ಸಮ್ಮತಿ ನೀಡಿದ್ದಾರೆ. ಅದರ ಪ್ರಕಾರ ಮಂದಿರದ ಅರ್ಚಕ ಪ್ರಕಾಶ ಅಂಬೇಕರ ಹಾಗೂ ಸತ್ಯಾನಂದ ಅಂಬೇಕರ ಅವರಿಬ್ಬರಿಗೂ ವಿವಾಹ ಮಾಡಿಸಿದ್ದಾರೆ.





