ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್’ಗೆ ಆಗಮಿಸುವವಿಗೆ ನಿರಾಸೆಯಾಗಿದೆ. ಇಲ್ಲಿ ಊಟವೂ ಸಿಗುತ್ತಿಲ್ಲ. ಉಪಹಾರವನ್ನು ಕೊಡುತ್ತಿಲ್ಲ. ಶುಕ್ರವಾರ ಸಹ ಮಧ್ಯಾಹ್ನದ ಅವಧಿಯಲ್ಲಿ ಕ್ಯಾಂಟೀನ್ ಬಾಗಿಲು ತೆರೆದಿರಲಿಲ್ಲ!
ಯಲ್ಲಾಪುರ ತಾಲೂಕಿನ ಬೆಲ್ ರಸ್ತೆಯಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಗಿದ್ದು, ಕಳೆದ ಒಂದು ವಾರದಿಂದ ಇಲ್ಲಿ ಸಾರ್ವಜನಿಕರಿಗೆ ಆಹಾರ ಸಿಗುತ್ತಿಲ್ಲ. ಅಲ್ಲಿ ಕೆಲಸ ಮಾಡುವ ನೌಕರರಿಗೆ ಸಹ ಸಂಬಳ ಆಗಿಲ್ಲ. ದಿನಸಿ ಸಾಮಗ್ರಿ ಪೂರೈಕೆ ಮಾಡಿದವರಿಗೂ ಹಣ ಸಿಕ್ಕಿಲ್ಲ.
ಯಲ್ಲಾಪುರದ ಇಂದಿರಾ ಕ್ಯಾಂಟೀನ್’ನಲ್ಲಿ ಬೆಳಗ್ಗೆ 5 ರೂಪಾಯಿಗೆ ಉಪಹಾರ ಮಧ್ಯಾಹ್ನ ಹಾಗೂ ರಾತ್ರಿ 10ರೂಪಾಯಿಗೆ ಊಟ ಕೊಡುವ ಬಗ್ಗೆ ಸರ್ಕಾರದ ನಿರ್ದೇಶನವಿತ್ತು. ನಿತ್ಯ 200 ಜನರಿಗೆ ಊಟ ನೀಡಲು ಸರ್ಕಾರ ಅನುಮತಿ ನೀಡಿದ್ದು, ಒಬ್ಬ ವ್ಯಕ್ತಿಗೆ ಒಂದು ದಿನದ ಮೂರು ಹೊತ್ತಿನ ಆಹಾರ ವಿತರಣೆಗಾಗಿ 42ರೂಪಾಯಿಗೆ ಟೆಂಡರ್ ಆಗಿತ್ತು. ಇದರಲ್ಲಿ 25 ರೂ ಗ್ರಾಹಕನಿಂದ ಪಾವತಿ ಆದರೆ, ಉಳಿದ 17 ರೂಪಾಯಿಯನ್ನು ಮೊತ್ತವನ್ನು ಸರ್ಕಾರ ಗುತ್ತಿಗೆದಾರರಿಗೆ ಪಾವತಿಸುತ್ತಿತ್ತು.
ಪ್ರಸ್ತುತ ಇಂದಿರಾ ಕ್ಯಾಂಟೀನ್ ಗುತ್ತಿಗೆ ಪಡೆದವರ ಗುತ್ತಿಗೆ ಅವಧಿ ಮುಕ್ತಾಯ ಹಂತದಲ್ಲಿದ್ದು, ಹೊಸಬರಿಗೆ ಕ್ಯಾಂಟೀನ್ ನಡೆಸಲು ಗುತ್ತಿಗೆಯಾಗಿದೆ. ಇಷ್ಟು ದಿನಗಳ ಕಾಲ ಗುತ್ತಿಗೆ ಪಡೆದವರು ಮುಂದಿನ ಅವಧಿಗೆ ಗುತ್ತಿಗೆ ಸಿಗದ ಕಾರಣ ಜನರಿಗೆ ಊಟ ವಿತರಣೆಗೆ ಆಸಕ್ತಿವಹಿಸಿಲ್ಲ. ಅವರಿಗೆ ಬಾಕಿ ಮೊತ್ತ ಸಹ ಪೂರ್ತಿಯಾಗಿ ಪಾವತಿಯಾಗದ ಕಾರಣ ಕೊನೆ ಅವಧಿಯಲ್ಲಿ ಕ್ಯಾಂಟೀನ್ ಮುನ್ನಡೆಸಲು ಮುಂದಾಗಿಲ್ಲ.




