ವಸತಿ ನಿವೇಶನಗಳಿಗೆ ನೀರು ಪೂರೈಕೆ ಮಾಡುವ ಬಗ್ಗೆ ಬಡಾವಣೆ ನಿರ್ಮಿಸಿದವರಿಗೆ ಯಲ್ಲಾಪುರ ಪಟ್ಟಣ ಪಂಚಾಯತ ನೋಟಿಸ್ ಜಾರಿ ಮಾಡಿದೆ. ಇದರೊಂದಿಗೆ 15 ದಿನಗಳ ಒಳಗೆ ನೀರು ಪೂರೈಕೆ ಮಾಡಿಕೊಡುವುದಾಗಿ ನೀರಿನ ಹಕ್ಕಿಗಾಗಿ ಹೋರಾಡುತ್ತಿರುವ ಮಂಜುನಾಥ ಹೆಗಡೆ ಅವರಿಗೂ ಪ ಪಂ ಮನವರಿಕೆ ಮಾಡಿದೆ.
ಯಲ್ಲಾಪುರದ ಹಿತ್ಲಕಾರಗದ್ದೆ ಬಳಿ `ದಾತ್ರಿ ನಗರ’ ಎಂದು ನಾಮಫಲಕ ಅಳವಡಿಸಿ ಅಲ್ಲಿ ವಸತಿ ಬಡಾವಣೆ ನಿರ್ಮಿಸಲಾಗಿದೆ. ಆದರೆ, ಅಲ್ಲಿನ ನಿವೇಶನಗಳಿಗೆ ಬಡಾವಣೆ ಅಭಿವೃದ್ಧಿ ಮಾಡಿದವರು ಮೂಲಭೂತ ಸೌಕರ್ಯ ಒದಗಿಸಿರಲಿಲ್ಲ. ಕುಡಿಯುವ ನೀರು ಸೇರಿ ಮೂಲಭೂತ ಸೌಕರ್ಯ ಒದಗಿಸುವುದು ಬಡವಾಣೆ ನಿರ್ಮಿಸಿದವರ ಕರ್ತವ್ಯವಾಗಿದ್ದು, ಅದನ್ನು ಒದಗಿಸದೇ ಬಡಾವಣೆಯನ್ನು ಪಟ್ಟಣ ಪಂಚಾಯತಗೆ ಹಸ್ತಾಂತರ ಮಾಡಿದ್ದರಿಂದ ಮಂಜುನಾಥ ಹೆಗಡೆ ಅವರು ಕುಡಿಯುವ ನೀರಿನ ಸಮಸ್ಯೆ ಅನುಭವಿಸುತ್ತಿದ್ದರು.
`ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ’ ಎಂದು ಮಂಜುನಾಥ ಹೆಗಡೆ ಪ್ರತಿಭಟನೆ ನಡೆಸಿದ್ದರು. ಆಗ ಪ ಪಂ ಮುಖ್ಯಾಧಿಕಾರಿ ಒಂದು ವಾರದ ಸಮಯ ಕೇಳಿದ್ದರು. ಆದರೆ, ಪಟ್ಟಣ ಪಂಚಾಯತ ಅನುದಾನದ ಅಡಿ ಖಾಸಗಿ ಲೇಔಟ್’ಗೆ ನೀರು ಪೂರೈಸಲು ಸತೀಶ ನಾಯ್ಕ ಸೇರಿ ವಿವಿಧ ಪ ಪಂ ಸದಸ್ಯರು ವಿರೋಧಿಸಿದ್ದರು. ಅವಧಿ ಮುಗಿದರೂ ನೀರು ಪೂರೈಕೆಯಾಗದ ಕಾರಣ ಗುರುವಾರ ಮಂಜುನಾಥ ಹೆಗಡೆ ಮತ್ತೆ ಪ್ರತಿಭಟನೆಗೆ ಕೂತರು. ಆಗ, ಅಲ್ಲಿ ವಿವಿಧ ಸದಸ್ಯರು ಹಾಗೂ ಅಧಿಕಾರಿಗಳು ಆಗಮಿಸಿ ಮತ್ತೆ 15 ದಿನದ ಸಮಯ ಕೋರಿದರು.
ಇನ್ನೂ ನಿವೇಶನ ಪಡೆದವರಿಗೆ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಬಡಾವಣೆ ನಿರ್ಮಿಸಿದ ಚೈತ್ರಾ ಗಣಪತಿ ಭಟ್ಟ ಅವರಿಗೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುನೀಲ ಗಾವಡೆ ನೋಟಿಸ್ ನೀಡಿದ್ದಾರೆ. ಆ ನೋಟಿಸ್ ಪ್ರತಿಯನ್ನು ಪ್ರತಿಭಟನಾ ನಿರತ ಮಂಜುನಾಥ ಹೆಗಡೆ ಅವರಿಗೆ ನೀಡಿ ಸಮಾಧಾನ ಮಾಡಿದರು.





