ಗಟಾರಕ್ಕೆ ಅಳವಡಿಸಿದ ಪೈಪ್ ವಿಷಯವಾಗಿ ಮಹ್ಮದ್ ಪೌಜನ್ ಹಾಗೂ ಇನ್ನೂ ಮೂವರ ಜೊತೆ ಗಲಾಟೆ ನಡೆದಿದೆ. ಆ ಗಲಾಟೆಯಲ್ಲಿ ಮೂವರು ಸೇರಿ ಗುತ್ತಿಗೆದಾರ ಮಹ್ಮದ್ ಪೌಜನ್’ಗೆ ಥಳಿಸಿದ್ದಾರೆ.
ಭಟ್ಕಳ ಆಜಾದನಗರದ ಅಂಗನವಾಡಿ ಬಳಿ ಮಹ್ಮದ್ ಪೌಜನ್ ವಾಸವಾಗಿದ್ದಾರೆ. ಅವರ ಮನೆ ಅಂಚಿನಲ್ಲಿ ಹರಿದ ಕಾಲುವೆಗೆ ಜಾಲಿ ಪಟ್ಟಣ ಪಂಚಾಯತದವರು ಪೈಪ್ ಅಳವಡಿಸಿದ್ದು, ಈ ವಿಷಯವಾಗಿ ಶಡಕುಳಿ ಹಸನ್, ಮಹಮದ್ ಗೌಸ್ ಹಾಗೂ ಮುಸ್ತಾಕ್ ಜಗಳವಾಡಿದ್ದಾರೆ.
ಫೆ 7ರಂದು ಆಜಾದ್ ನಗರ 6ನೇ ಕ್ರಾಸಿನ ಹತ್ತಿರ ಬಂದ ಆ ಮೂವರು `ಇಲ್ಲಿದ್ದ ಪೈಪ್ ತೆಗೆಯಬೇಕು’ ಎಂದು ತಾಕೀತು ಮಾಡಿದ್ದಾರೆ. ಆಗ, ಮಹ್ಮದ್ ಪೌಜನ್ ಅದನ್ನು ನಿರಾಕರಿಸಿದ್ದಾರೆ. ಜೊತೆಗೆ `ಪೈಪ್ ಅಳವಡಿಸಿದ್ದು ಪಟ್ಟಣ ಪಂಚಾಯತದವರು. ಅವರ ಬಳಿಯೇ ತೆಗೆಯಲು ಹೇಳಿ’ ಎಂದಿದ್ದಾರೆ. ಇದರಿಂದ ಸಿಟ್ಟಾದ ಆ ಮೂವರು ಪೈಪನ್ನು ಒಡೆಯುವ ಪ್ರಯತ್ನ ನಡೆಸಿದ್ದಾರೆ.
ಪಟ್ಟಣ ಪಂಚಾಯತ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಕೆಟ್ಟದಾಗಿ ಬೈದು ಪೈಪ್ ಒಡೆಯುತ್ತಿದ್ದ ದೃಶ್ಯಾವಳಿಗಳನ್ನು ಮಹ್ಮದ್ ಪೌಜನ್ ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ. ವಿಡಿಯೋ ಮಾಡುವುದನ್ನು ನೋಡಿದ ಆ ಮೂವರು ಮಹ್ಮದ್ ಪೌಜನ್ ಬಟ್ಟೆ ಹಿಡಿದು ಎಳೆದಾಟ ನಡೆಸಿದರು. ಅದಾದ ನಂತರ ಅವರನ್ನು ನೆಲಕ್ಕೆ ಬೀಳಿಸಿ ಥಳಿಸಿದರು.
ಮಹ್ಮದ್ ಪೌಜನ್ ಅವರ ಕನ್ನಡ ಕಿತ್ತೆಸೆದರು. ಬಾಯಿ, ಮುಖಕ್ಕೆ ಹೊಡೆದು ಗಾಯಗೊಳಿಸಿದರು. ಕೊನೆಗೆ ವಿಡಿಯೋ ಚಿತ್ರಿಕರಣ ಮಾಡಿದ್ದ ಮೊಬೈಲನ್ನು ಪುಡಿ ಪುಡಿ ಮಾಡಿದರು. ಈ ಎಲ್ಲಾ ವಿದ್ಯಮಾನಗಳ ಬಗ್ಗೆ ಮಹ್ಮದ್ ಪೌಜನ್ ಅವರು ಪೊಲೀಸ್ ದೂರು ನೀಡಿದ್ದಾರೆ.




