ಮನೆ ಅಂಗಳದಲ್ಲಿದ್ದ ಅಡಿಕೆ ಕದ್ದು ಪರಾರಿಯಾಗಿದ್ದ ಕಳ್ಳನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿoದ ಅಡಿಕೆ ಚೀಲಗಳನ್ನು ವಶಕ್ಕೆ ಪಡೆದಿದ್ದಾರೆ.
ಸಿದ್ದಾಪುರ ತಾಲೂಕಿನ ಕೋಲಸಿರ್ಸಿಯ ಮಾರುತಿನಗರದಲ್ಲಿ ಮೂರು ದಿನದ ಹಿಂದೆ ಅಡಿಕೆ ಕಳ್ಳತನ ನಡೆದಿತ್ತು. ನಾಗರಾಜ ಗೌಡ ಅವರು ಮನೆ ಅಂಗಳದಲ್ಲಿ ದಾಸ್ತಾನು ಮಾಡಿದ್ದ ಅಡಿಕೆ ಕಳ್ಳರ ಪಾಲಾಗಿತ್ತು. ಮನೆ ಅಂಗಳಕ್ಕೆ ನುಗ್ಗಿ ಅಡಿಕೆ ಕದ್ದವನ್ನು ಪತ್ತೆ ಮಾಡುವಂತೆ ಕೋರಿ ನಾಗರಾಜ ಗೌಡ ಅವರು ಪೊಲೀಸರ ಮೊರೆ ಹೋಗಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಿದರು. ಆಗ, ಕೊಲಸಿರ್ಸಿ ಗುಡ್ಡೆಕೇರಿಯ ಕಾಶಿನಾಥ ಕೃಷ್ಣ ನಾಯ್ಕ ಸಿಕ್ಕಿ ಬಿದ್ದರು. ಕದ್ದಿದ್ದ 45 ಕೆಜಿ ಅಡಿಕೆಯನ್ನು ಕಾಶಿನಾಥ ನಾಯ್ಕ ಪೊಲೀಸರ ಮುಂದಿಟ್ಟರು.
ಪೊಲೀಸ್ ನಿರೀಕ್ಷಕ ಜೆ ಬಿ ಸೀತಾರಾಮ ಕಳ್ಳನನ್ನು ಹುಡುಕಿದ್ದು, ಪಿಎಸ್ಐ ಅನಿಲ ಬಿ ಎಂ ಹಾಗೂ ಗೀತಾ ಸಿರ್ಸಿಕರ್ ಪ್ರಯತ್ನದಿಂದ ಅಡಿಕೆಯೂ ಸಿಕ್ಕಿದೆ.




