ಅಪ್ಪ-ಮಗ ಸೇರಿ ನಡೆಸುತ್ತಿದ್ದ ಕಿರಾಣಿ ಅಂಗಡಿಗೆ ನುಗ್ಗಿದ ಕಳ್ಳರು ಗಲ್ಲಾ ಪೆಟ್ಟಿಗೆಯಲ್ಲಿದ್ದ 7460ರೂ ಎಗರಿಸಿದ್ದಾರೆ. `ಆ ಕಳ್ಳರನ್ನು ಹುಡುಕಿ, ನಮ್ಮ ಹಣ ಮರಳಿಸಿ’ ಎಂದು ಕಿರಾಣಿ ವ್ಯಾಪಾರಿ ಶ್ರೀಪಾದ ದೇಸಾಯಿ ಪೊಲೀಸ್ ದೂರು ನೀಡಿದ್ದಾರೆ.
ಜೊಯಿಡಾದ ಕುಂಬಾರವಾಡದಲ್ಲಿ ಶ್ರೀಪಾದ ದೇಸಾಯಿ ಅವರು ಕಿರಾಣಿ ವ್ಯಾಪಾರ ಮಾಡಿಕೊಂಡಿದ್ದಾರೆ. ನಿತ್ಯ ವ್ಯಾಪಾರ ಮುಗಿಸಿ ಅವರು ತಮ್ಮ ಊರಾದ ಗೋಕರ್ಡಾಗೆ ತೆರಳುತ್ತಾರೆ. ಅದರಂತೆ ಫೆ 5ರ ರಾತ್ರಿ ವ್ಯಾಪಾರ ಮುಗಿಸಿದ ನಂತರ ಬಾಡಿಗೆದಾರರು ನೀಡಿದ 7 ಸಾವಿರ ರೂ ಹಣವನ್ನು ಗಲ್ಲಾ ಪೆಟ್ಟಿಗೆಯಲ್ಲಿರಿಸಿದ್ದರು. ಅದರೊಂದಿಗೆ ಆ ದಿನದ ವ್ಯಾಪಾರದ 460ರೂ ಹಣವನ್ನು ಜೊತೆಗಿರಿಸಿದ್ದರು.
ಅದಾದ ನಂತರ ಅಂಗಡಿಗೆ ಬೀಗ ಹಾಕಿ ಬೀಗದ ಕೀಯನ್ನು ಅಂಗಡಿ ಹಿಂದಿನ ಗೋಡೌನ್ ಒಳಗೆ ಜೋಪಾನವಾಗಿಟ್ಟಿದ್ದರು. ಅದಾದ ನಂತರ ಎಂದಿನoತೆ ಮನೆಗೆ ಹೋಗಿದ್ದರು. ಮರು ದಿನ ಬೆಳಗ್ಗೆ ಮಗ ಆನಂದರಾಜ ದೇಸಾಯಿ ಜೊತೆ ಅಂಗಡಿಗೆ ಬಂದಾಗ ಅಂಗಡಿಯ ಬೀಗ ಮುರಿದಿತ್ತು. ಗೌಡೋನ್ ಒಳಗಿನ ಕೀ ಹಾಗೇ ಇತ್ತು. ಅಂಗಡಿಯ ಬೀಗ ಮೀಟಿ ಕಳ್ಳರು ಒಳಗೆ ಪ್ರವೇಶಿಸಿರುವುದು ಅರಿವಿಗೆ ಬಂದಿತು.
ಒಳಗೆ ಹೋಗಿ ಹುಡುಕಿದಾಗ ಗಲ್ಲಾ ಪೆಟ್ಟಿಯಲ್ಲಿದ್ದ ಹಣ ಕಾಣೆಯಾಗಿತ್ತು. ಈ ಬಗ್ಗೆ ಮನೆಯಲ್ಲಿ ಚರ್ಚಿಸಿ ಅವರೆಲ್ಲರ ಸಲಹೆಪಡೆದು ಶ್ರೀಧರ ದೇಸಾಯಿ ಅವರು ಪೊಲೀಸ್ ದೂರು ನೀಡಿದರು. ಕಳ್ಳನನ್ನು ಹುಡುಕಿ, ನಮ್ಮ ಹಣ ಮರಳಿಸಿ ಎಂದು ಮನವಿ ಮಾಡಿದರು.




