ಆಕಸ್ಮಿಕ ಅಗ್ನಿ ಅವಘಡದಿಂದ ನಾಗೇಂದ್ರ ಹೆಗಡೆ ಅವರ ಮಾಲಕತ್ವದ ಕೊಟ್ಟಿಗೆ ಸುಟ್ಟು ಕರಕಲಾಗಿದೆ. ಕಣ್ಮುಂದೆಯೇ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಕಂಡರೂ ಕೊಟ್ಟಿಗೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಯಲ್ಲಾಪುರ ತಾಲೂಕಿನ ಹಾಸಣಗಿ ಗ್ರಾ ಪಂ ವ್ಯಾಪ್ತಿಯ ಮಂಚಿಕೇರಿಯಲ್ಲಿ ನಾಗೇಂದ್ರ ಶಂಬು ಹೆಗಡೆ ಮಾಳಕೊಪ್ಪ ಅವರು ತೋಟ ಮಾಡಿಕೊಂಡಿದ್ದಾರೆ. ಅಲ್ಲಿಯೇ ಅವರ ವಸತಿಯೂ ಇದ್ದು, ಜಾನುವಾರುಗಳನ್ನು ಸಾಕಿ ಹೈನುಗಾರಿಕೆಯಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಗುರುವಾರ ಸಂಜೆ ಅವರ ಮನೆ ಅಂಚಿನ ಕೊಟ್ಟಿಗೆಗೆ ಬೆಂಕಿ ತಗುಲಿದೆ. ತಕ್ಷಣ ಅವರು ಕೊಟ್ಟಿಗೆಯಲ್ಲಿದ್ದ ಜಾನುವಾರುಗಳನ್ನು ಬಿಡುಗಡೆ ಮಾಡಿ ಅವುಗಳ ಜೀವ ಉಳಿಸಿದರು.
ಅದಾದ ನಂತರ ಕೊಟ್ಟಿಗೆಯಲ್ಲಿ ದಾಸ್ತಾನು ಮಾಡಿದ್ದ ಗೋವಿನ ಮೇವು ಹಾಗೂ ವಿವಿಧ ಉಪಕರಣಗಳನ್ನು ರಕ್ಷಿಸುವ ಪ್ರಯತ್ನ ಮಾಡಿದರು. ಅಕ್ಕಪಕ್ಕದವರು ಹಾಗೂ ಊರಿನವರು ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡಿದರು. ವಿಷಯ ಅರಿತು ಅಗ್ನಿಶಾಮಕ ಸಿಬ್ಬಂದಿ ಸಹ ಬಂದರು. ಆದರೆ, ಕೊಟ್ಟಿಗೆ ಹೊತ್ತಿ ಉರಿಯುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.
1 ಲಕ್ಷ ರೂ ಮೌಲ್ಯದ ಮೇವು ಹಾಗೂ 3 ಲಕ್ಷ ರೂ ಮೌಲ್ಯದ ಉಪಕರಣಗಳು ಬೆಂಕಿಗೆ ಆಹುತಿಯಾದವು. ಕೊಟ್ಟಿಗೆ ಸಹ ಸುಟ್ಟು ಕರಕಲಾಯಿತು. ಅಗ್ನಿಶಾಮಕ ಸಿಬ್ಬಂದಿಯ ಸಾಹಸದಿಂದಾಗಿ ಮನೆಯ ಕಡೆ ಬೆಂಕಿಯ ಜ್ವಾಲೆ ಬರುವುದು ತಪ್ಪಿತು. ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.




