ಸ್ಮಶಾನಕ್ಕೆ ತೆರಳಿ ಗಾಂಜಾ ಮಾರಾಟ ಮಾಡುತ್ತಿದ್ದ ರಿಕ್ಷಾ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 20 ಸಾವಿರ ರೂ ಮೌಲ್ಯದ ಗಾಂಜಾ ಜೊತೆ 2 ಲಕ್ಷ ರೂ ಮೌಲ್ಯದ ರಿಕ್ಷಾ ಸಹ ಜಪ್ತುಪಡಿಸಿಕೊಂಡಿದ್ದಾರೆ.
ಕಾರವಾರದ ಕೋಡಿಭಾಗ ಬಳಿಯ ಪಂಚರಿಷಿವಾಡದ ನಾಗರಾಜ ಸಿರ್ಸಿಕರ್ (34) ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು. ದುಷ್ಟರ ಸಹವಾಸದಿಂದಾಗಿ ಅವರಿಗೆ ಗಾಂಜಾ ಮಾರಾಟದ ಆಸೆ ಹುಟ್ಟಿತು. ಗಾಂಜಾ ಮಾರಾಟದ ಮೂಲಕ ರಿಕ್ಷಾ ಬಾಡಿಗೆಗಿಂತ ದುಪ್ಪಟ್ಟು ಹಣ ಸಂಪಾದಿಸುವ ದುರುದ್ದೇಶದಿಂದ ಅವರು ಅಡ್ಡದಾರಿ ಹಿಡಿದಿದ್ದರು.
ದೋಬಿಘಾಟ್ ಸ್ಮಶಾನದ ಬಳಿ ಅವರು ಗಾಂಜಾ ಮಾರಾಟ ಮಾಡುವುದನ್ನು ರೂಢಿಸಿಕೊಂಡಿದ್ದರು. ಅದರ ಪ್ರಕಾರ ಫೆ 13ರಂದು ಸಹ ಸ್ಮಶಾನದೊಳಗೆ ರಿಕ್ಷಾ ನಿಲ್ಲಿಸಿ ಗಾಂಜಾ ಮಾರಾಟ ಮಾಡುತ್ತಿದ್ದರು. ಮಾದಕ ವ್ಯಸನ ಮಾರಾಟದಿಂದ ಅವರು 500ರೂ ಹಣವನ್ನು ಸಂಪಾದಿಸಿದ್ದರು. ಆದರೆ, ಮಾದಕ ವ್ಯಸನದ ವಿರುದ್ಧ ಅರಿವು ಮೂಡಿಸುತ್ತಿರುವ ಪೊಲೀಸರು ಸುಮ್ಮನೆ ಕೂರಲಿಲ್ಲ.
ಸ್ಮಶಾನದಲ್ಲಿ ಗಾಂಜಾ ಮಾರಾಟ ನಡೆದ ಬಗ್ಗೆ ಪಿಎಸ್ಐ ರವೀಂದ್ರ ಬೀರಾದರ್ ಪೊಲೀಸ್ ಅಧೀಕ್ಷಕ ಎಂ ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ ಎಂ, ಪೊಲೀಸ್ ಉಪಾಧ್ಯಕ್ಷ ಎಸ್ ವಿ ಗಿರೀಶ ಅವರಿಗೆ ಮಾಹಿತಿ ರವಾನಿಸಿದರು. ಪೊಲೀಸ್ ನಿರೀಕ್ಷಕ ರಮೇಶ ಹೂಗಾರ್ ಅವರಿಗೆ ತಿಳಿಸಿ ಪಿಎಸ್ಐ ಕುಮಾರ ಕಾಂಬ್ಳೆ ಅವರ ಜೊತೆ ಅಲ್ಲಿ ದಾಳಿ ನಡೆಸಿದರು.
ಪೊಲೀಸ್ ಸಿಬ್ಬಂದಿ ಸೂರಜ ಕೋಟಾರಕರ, ಮುಕ್ತುಮಸಾಬ ಪತ್ತೆಖಾನ್, ಸುರೇಶ ಮರಾಠೆ, ಚಂದನ್ ಆರ್, ರಾಜೇಶ ನಾಯಕ, ಗೌಥಮ ರೋಡಣ್ಣನವರ್, ಗಿರೀಶಯ್ಯ, ದೇವೇಂದ್ರಪ್ಪ ಸೇರಿ ಅಲ್ಲಿದ್ದ ನಾಗರಾಜ ಸಿರ್ಸಿಕರ್ರನ್ನು ವಶಕ್ಕೆ ಪಡೆದರು. 976ಗ್ರಾಂ ಗಾಂಜಾ ಹಾಗೂ ವ್ಯಾಪಾರದಿಂದ ದೊರೆತಿದ್ದ 500ರೂ ಹಣವನ್ನು ಅವರು ನ್ಯಾಯಾಲಯಕ್ಕೆ ಒಪ್ಪಿಸಿದರು.




