`ಹಿoದು ಸಮಾಜ ಹಿಂದುಳಿಯಲು ವಿಳಂಬ ವಿವಾಹವೇ ಕಾರಣ’ ಎಂದು ಸೋಂದಾ ಸ್ವರ್ಣವಲ್ಲಿಯ ಶ್ರೀ ಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಹೇಳಿದ್ದಾರೆ.
ಯಲ್ಲಾಪುರ ತಾಲೂಕಿನ ಚಂದಗುಳಿಯ ಘಂಟೆ ಗಣಪತಿ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಮಹೋತ್ಸವದಲ್ಲಿ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು `ಹಿಂದು ಸಮಾಜ ಹಿಂದಕ್ಕೆ ಹೋಗಲು ಸೂಕ್ತ ವಯಸ್ಸಿನಲ್ಲಿ ವಿವಾಹ ಆಗದೇ ಇರುವುದೇ ಮುಖ್ಯ ಕಾರಣ. ಸರಿಯಾದ ವಯಸ್ಸಿನಲ್ಲಿ ಮಕ್ಕಳು ವಿವಾಹವಾಗುವುಕ್ಕೆ ಪಾಲಕರು ಮಾರ್ಗದರ್ಶನವನ್ನು ಮಾಡಬೇಕು’ ಎಂದು ಕರೆ ನೀಡಿದ್ದಾರೆ.
`ನಮ್ಮಲ್ಲಿ ಭಕ್ತಿಯ ಜಾಗೃತಿಯಾದರೆ ಮನಸ್ಸು ಶುದ್ಧವಾಗುತ್ತದೆ. ಮನಸ್ಸಿನ ಶುದ್ಧಿಗಾಗಿ ದೇವಸ್ಥಾನಗಳ ಅಗತ್ಯವಿದೆ’ ಎಂದು ಶ್ರೀಗಳು ಹೇಳಿದ್ದಾರೆ. `ವಿಚಾರ ಶುದ್ಧಿಯ ಕೊರತೆಯಿಂದ ನಮ್ಮ ಆಚಾರದಲ್ಲಿ ಅಶುದ್ಧಿಯಾಗಿದೆ. ಇದರ ಪರಿಣಾಮದಿಂದ ಪ್ರಚಾರದಲ್ಲಿ ಅಶುದ್ಧಿಯಾಗುತ್ತಿದೆ. ಆಚಾರ, ವಿಚಾರ ಹಾಗೂ ಪ್ರಚಾರ ಶುದ್ಧಿ ಆಗಲು ಮೊದಲ ಹಂತ ದೇವಸ್ಥಾನದಲ್ಲಿ ಆರಂಭವಾಗಬೇಕು. ಅರ್ಚಕನ ತಪೋಯೋಗದಿಂದ ದೇವಸ್ಥಾನ ಬೆಳೆಯಬೇಕು, ದೇವಸ್ಥಾನ ಭಕ್ತಿಯ ಕೇಂದ್ರವಾಗಬೇಕು. ಸಂಪಾದನೆ ಅಲ್ಲಿನ ಮೂಲ ಉದ್ದೇಶವಾಗಬಾರದು’ ಎಂದವರು ಹೇಳಿದರು.
ಶಿರಳಗಿಯ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ `ಮಾನಸಿಕ ಕಾಯಿಲೆಗಳಿಗೆ ದೇವಸ್ಥಾನವೇ ಆಸ್ಪತ್ರೆ. ಮನಸ್ಸಿನ ಭಾರವನ್ನೆಲ್ಲ ದೇವರ ಪಾದದಲ್ಲಿ ಹಾಕಿ, ಚಿಂತೆ ಕಳೆದುಕೊಂಡು ಸಂತಸದ ಬದುಕು ಸಾಗಿಸುವ ವಿಶೇಷತೆ ಸನಾತನ ಧರ್ಮದಲ್ಲಿ ಮಾತ್ರ ಇದೆ’ ಎಂದರು. `ಸ್ವರ್ಣವಲ್ಲೀ ಶ್ರೀಗಳಂತಹ ಸದ್ಗುರುಗಳ ಕೃಪೆಯಿಂದ ಈ ಭಾಗದ ಭಕ್ತರಲ್ಲೂ ಸದ್ಗುಣವೇ ತುಂಬಿದೆ. ಅಂತಹ ಸದ್ಗುರುಗಳ ಮಾರ್ಗದರ್ಶನದಲ್ಲಿ ಸಾಗಿದರೆ ಬದುಕು ಸಾರ್ಥಕವಾಗುತ್ತದೆ’ ಎಂದರು.
ಸAಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಶಿವರಾಮ ಹೆಬ್ಬಾರ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ವಿ.ಎಸ್.ಪಾಟೀಲ, ಗೋವಾದ ಮಾಜಿ ಶಾಸಕ ವಿಜಯ ಪೈ, ವರ್ತಕ ಎಂ ಎನ್ ಹೆಗಡೆ ಸಾಗರ, ಹಿರಿಯರಾದ ಗಣಪತಿ ಭಟ್ಟ ಗೇರಗದ್ದೆ ಇತರರಿದ್ದರು.







